ರಾಜಕಾರಣದಿಂದ ದೂರ ಸರಿದು, ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ರಮ್ಯಾ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದರು. ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿ, ಇನ್ಮುಂದೆ ಸಿನಿಮಾ ರಂಗದಲ್ಲೇ ಉಳಿಯುವ ಭರವಸೆಯನ್ನೂ ನೀಡಿದ್ದರು. ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತ ಆಗುತ್ತಿದ್ದಂತೆಯೇ ರಮ್ಯಾ ಒಳಗಿನ ರಾಜಕಾರಣಿ ಮತ್ತೆ ಎದ್ದು ಕೂತಿದ್ದಾನೆ. ಮಳೆಯ ಈ ಆವಾಂತರಕ್ಕೆ ರಿಯಲ್ ಎಸ್ಟೇಟ್ ಮಾಡುತ್ತಿರುವ ರಾಜಕಾರಣಿಗಳೇ ಕಾರಣ ಎಂದು ದೂಷಿಸಿದ್ದಾನೆ.
ಕಳೆದ ಎರಡು ವಾರಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಅನೇಕ ಪ್ರದೇಶಗಳು ಕೆರೆಗಳಂತಾಗಿವೆ. ಮನೆಗೆ ನೀರು ನುಗ್ಗಿ ಜನ ಜೀವನಕ್ಕೆ ಅಪಾರ ತೊಂದರೆ ಉಂಟಾಗಿದೆ. ವಾಹನ ಸವಾರರಿಗಂತೂ ನಿತ್ಯ ನರಕ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ರಮ್ಯಾ, ಬೆಂಗಳೂರು ಹೀಗೆ ಆಗುವುದಕ್ಕೆ ಕಾರಣ ಜನಪ್ರತಿನಿಧಿಗಳು. 28 ಎಂಎಲ್.ಎ ಗಳಿಗೆ 26 ಎಂಎಲ್ಎಗಳು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ಈ ಪ್ರಮಾಣದಲ್ಲಿ ಅವರೇ ಇದ್ದರೆ, ಬೆಂಗಳೂರನ್ನು ಕಾಪಾಡಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ
ಹಣ ಇದ್ದವರಿಗೆ ಅದರಲ್ಲೂ ರಿಯಲ್ ಎಸ್ಟೇಟ್ ಮಾಡುತ್ತಿರುವ ಹೆಚ್ಚಿನ ಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಏಕೆ? ಎಂದು ಪ್ರಶ್ನೆ ಮಾಡಿರುವ ರಮ್ಯಾ, ಚುನಾವಣಾ ಆಯೋಗವು ಒಬ್ಬ ಎಂ.ಎಲ್.ಎ ಗೆ ಚುನಾವಣೆ ಖರ್ಚು ಮಾಡಲು ನಲವತ್ತು ಲಕ್ಷ ರೂಪಾಯಿ ಮಿತಿ ನಿಗಧಿ ಮಾಡಿದೆ. ಆದರೆ, ಕೋಟಿ ಲೆಕ್ಕಗಳಲ್ಲಿ ಖರ್ಚಾಗುತ್ತಿದೆ ಏಕೆ? ಎಂದಿದ್ದಾರೆ. ಹಾಗಾಗಿ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಅವರು ಮನವಿ ಮಾಡಿದ್ದಾರೆ.
ನಗರದಲ್ಲಿ ನಡೆಯುವ ಮತದಾನದ ಬಗ್ಗೆಯೂ ಅವರು ಟ್ವಿಟ್ ಮಾಡಿದ್ದು, ವಿಶೇಷವಾಗಿ ಹೆಚ್ಚಿನ ಜನರು ನಗರದಲ್ಲಿ ಇರುವವರೇ ಮತ ಹಾಕುವುದಿಲ್ಲ. ಇಂತಹ ಘಟನೆಗಳು ಸಂಭವಿಸಿದಾಗ ಕೋಪ ಕಾಣುತ್ತದೆ. ನಾವಿರುವ ಈ ಸ್ಥಿತಿಗೆ ನಾವೆಲ್ಲರೂ ದೂಷಿಸಬೇಕಾಗಿದೆ ಎಂದು ಮಾರ್ಮಿಕವಾಗಿಯೇ ರಮ್ಯಾ ಟ್ವಿಟ್ ಮಾಡಿದ್ದಾರೆ. ರಮ್ಯಾ ಮಾಡಿರುವ ಈ ಟ್ವಿಟ್ ಗೆ ಪರ ವಿರೋಧದ ಕಾಮೆಂಟ್ ಗಳು ಕೂಡ ಬರುತ್ತಿವೆ. ಒಟ್ಟಿನಲ್ಲಿ ಬೆಂಗಳೂರು ಹೀಗೆ ಆಗುವುದಕ್ಕೆ ರಿಯಲ್ ಎಸ್ಟೇಟ್ ಕಾರಣ ಎಂದು ಅವರು ಮೂರೂ ಟ್ವಿಟ್ ನಲ್ಲೂ ಹೇಳಿದ್ದಾರೆ.