ತೆಲುಗು ಸಿನಿಮಾ ರಂಗದ ಖ್ಯಾತ ತಾರಾ ಸಮಂತಾ ಅವರ ಬಗ್ಗೆ ದಿನಕ್ಕೊಂದು ಸುದ್ದಿ ಹೊರ ಬೀಳುತ್ತಿದೆ. ಮೊನ್ನೆಯಷ್ಟೇ ಅವರು ದಕ್ಷಿಣದ ಹಲವು ಸಿನಿಮಾಗಳನ್ನು ಕೈ ಬಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಮತ್ತೊಂದು ನ್ಯೂಸ್ ಹೊರ ಬಂದಿದ್ದು, ಬಾಲಿವುಡ್ (Bollywood) ಸಿನಿಮಾಗಳಿಂದಲೂ ಅವರನ್ನು ಕೈ ಬಿಡಲಾಗಿದೆಯಂತೆ. ಅವರ ಆರೋಗ್ಯ ಸುಧಾರಿಸಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಹಲವು ಪ್ರಾಜೆಕ್ಟ್ ಗಳಿಂದ ಅವರನ್ನು ಕೈ ಬಿಡಲಾಗಿದೆ ಎನ್ನುವುದು ಸುಳ್ಳು ಎನ್ನುವ ಮಾಹಿತಿ ಹೊರ ಬಿದ್ದಿದೆ. ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಖುಷಿ’ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದರು. ಈಗಾಗಲೇ ಎರಡು ಹಂತದ ಚಿತ್ರೀಕರಣ ಕೂಡ ಮುಗಿದಿದೆ. ಈ ಸಿನಿಮಾದಿಂದ ಅವರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗಿತ್ತು. ಈ ಕುರಿತು ಚಿತ್ರತಂಡವೇ ಸ್ಪಷ್ಟನೆ ಕೊಟ್ಟಿದೆ.
ಸದ್ಯ ಸಮಂತಾ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗಾಗಿಯೇ ಶೂಟಿಂಗ್ ಪ್ರಾರಂಭಿಸಿಲ್ಲ. ಅವರು ಈಗಾಗಲೇ ಎರಡು ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅವರಿಗೆ ವಿಶ್ರಾಂತಿಯ ಅಗತ್ಯ ಇರುವುದರಿಂದ ಸಂಕ್ರಾತಿಯ ನಂತರ ಮತ್ತೆ ಶೂಟಿಂಗ್ ಪ್ರಾರಂಭ ಮಾಡುತ್ತೇವೆ ಎಂದು ಖುಷಿ ತಂಡವೇ ಸ್ಪಷ್ಟನೆ ನೀಡಿದೆ. ಅವರು ಈ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವುದು ಕೇವಲ ಗಾಸಿಪ್ ಎಂದೂ ಅವರು ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಸಮಂತಾ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ
ಸಮಂತಾ (Samantha) ಅಪರೂಪದ ಕಾಯಿಲೆಗೆ ತುತ್ತಾಗಿದ್ದು ಗುಟ್ಟಿನ ವಿಚಾರವೇನೂ ಅಲ್ಲ. ಈ ಕಾಯಿಲೆ ಪ್ರಾರಂಭಿಕ ಹಂತದಲ್ಲಿ ಇರುವಾಗಲೇ ಗೊತ್ತಾಗಿದ್ದರಿಂದ ಅದಕ್ಕೆ ಸೂಕ್ತ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ. ಈ ಚಿಕಿತ್ಸೆ ಪಡೆಯಲೆಂದೇ ಅವರು ವಿದೇಶಕ್ಕೂ ಹಾರಿದ್ದರು. ಇದೊಂದು ಅಪಾಯಕಾರಿ ಸಮಸ್ಯೆಯಾದರೂ, ಅದಕ್ಕೆ ಸೂಕ್ತ ಚಿಕಿತ್ಸೆ ಇದೆ ಎಂದು ಸ್ವತಃ ಅವರೇ ಬರೆದುಕೊಂಡಿದ್ದರು. ಇದು ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು.
ಈ ನಡುವೆ ಸಮಂತಾ ನಟನೆಯ ಎರಡು ಚಿತ್ರಗಳು ರಿಲೀಸ್ ಆದವು. ಎರಡೂ ಚಿತ್ರದ ಪ್ರಚಾರಕ್ಕೆ ಅವರು ಬರಲಿಲ್ಲ. ಹೀಗಾಗಿ ಸಮಂತಾ ಗಂಭೀರ ಸಮಸ್ಯೆಯಿಂದಲೇ ಬಳಲುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಕಾರಣದಿಂದಾಗಿಯೇ ಅವರನ್ನು ಪ್ರಾಜೆಕ್ಟ್ ಗಳಿಂದ ಕೈ ಬಿಡಲಾಗುತ್ತಿದೆ ಎಂದು ಸುದ್ದಿ ಆಗಿತ್ತು. ಈ ಸುದ್ದಿಗೆ ಕೆಲವ ತಂಡಗಳು ಈಗೀಗ ಸ್ಪಷ್ಟನೆಯನ್ನು ಕೊಡುತ್ತಿವೆ. ಈ ಮೂಲಕ ಸಮಂತಾ ಮತ್ತೆ ಚಿತ್ರೀಕರಣಕ್ಕೆ ಬರಲಿದ್ದಾರೆ ಎನ್ನುವ ವಿಶ್ವಾಸವನ್ನೂ ವ್ಯಕ್ತಪಡಿಸಿವೆ.