ಹೈದರಾಬಾದ್: ಟಾಲಿವುಡ್ ನ ಖ್ಯಾತ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ಈಗಾಗಲೇ ವಿವಾಹ ನಡೆದು ತಿಂಗಳು ಕಳೆದಿದೆ. ಆದರೆ ಭಾನುವಾರದಂದು ಅದ್ಧೂರಿಯಾಗಿ ತಮ್ಮ ಆರತಕ್ಷತೆ ಕಾರ್ಯವ್ನನು ಆಚರಿಸಿಕೊಂಡಿದ್ದಾರೆ.
ಅಕ್ಟೋಬರ್ 6 ರಂದು ಈ ಜೋಡಿ ಗೋವಾದ ಡಬ್ಲ್ಯು ರೆಸಾರ್ಟ್ ನಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಬರೋಬ್ಬರಿ ಒಂದು ತಿಂಗಳ ನಂತರ ಮುತ್ತಿನ ನಗರಿ ಹೈದರಾಬಾದ್ ನಲ್ಲಿರುವ ಎನ್-ಕನ್ವೆಷನ್ ಸೆಂಟರ್ ನಲ್ಲಿ ಆರತಕ್ಷತೆ ನಡೆದಿದೆ.
ನಾಗ ಚೈತನ್ಯ ಅವರು ಸುಮಾರು 2 ವಾರಗಳಿಂದ ಆರತಕ್ಷತೆಗಾಗಿ ಕಾಯುತ್ತಿದ್ದು, ಸಮಂತಾ ಅಕ್ಕಿನೇನಿ ಅವರು ತಮಿಳಿನ ಸಿನಿಮಾದ ಶೂಟಿಂಗ್ನಲ್ಲಿ ಬ್ಯೂಸಿ ಇದ್ದರು. ಜೊತೆಗೆ ಮಾವ ನಾಗರ್ಜುನ ಅವರ ಜೊತೆ ಅಭಿನಯಿಸಿರುವ `ರಾಜು ಗಾರಿ ಗಾಧಿ-2′ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತೊಡಗಿದ್ದರು. ಈ ಎಲ್ಲಾ ಕಾರಣಗಳಿಂದ ಆರತಕ್ಷತೆ ತಡವಾಗಿ ನಡೆದಿದೆ. ಇನ್ನೂ ಮದುವೆ ಆಯಿತು, ಆರತಕ್ಷತೆನೂ ನಡೆದಿದೆ. ಆರತಕ್ಷತೆ ಬಳಿಕ ಚೆನ್ನೈ ನಲ್ಲಿರುವ ಚೈತನ್ಯರ ತಾಯಿಯ ಮನೆಗೆ ಭೇಟಿ ನೀಡಲಿದ್ದಾರೆ.
ಭಾನುವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಮಂತಾ-ನಾಗಚೈತನ್ಯ ಜೋಡಿಗೆ ಟಾಲಿವುಡ್ನ ಗಣ್ಯರು ಬಂದು ಶುಭಹಾರೈಸಿದ್ದಾರೆ. ಆರತಕ್ಷತೆ ಕಾರ್ಯಕ್ರಮದಲ್ಲಿ ನಾಗಚೈತನ್ಯ ಸ್ನೇಹಿತ ನಟ ರಾಮಚರಣ್ ತೇಜ, ನಿರ್ದೇಶಕ ಎಸ್ಎಸ್ ರಾಜಮೌಳಿ, ನಂದಮೂರಿ ಹರಿಕೃಷ್ಣ, ನಟ ಚಿರಂಜೀವಿ, ವೆಂಕಟೇಶ್ ಸೇರಿದಂತೆ ಅನೇಕ ನಟರು ಆಗಮಿಸಿದ್ದರು. ಒಟ್ಟಿನಲ್ಲಿ ಆರತಕ್ಷತೆಯಲ್ಲಿ ಸಿನಿಮಾ ತಾರೆಯರ ರಂಗಿನಿಂದ ಮಿಂಚುತ್ತಿತ್ತು.