ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆಸಿದ್ದ ಪ್ರತಿಭಟನೆ ಈಗ ದೇವಾಲಯದ ಆದಾಯದ ಮೇಲೆ ಪರಿಣಾಮ ಬೀರಿದೆ.
ಹೌದು, ಶಬರಿಮಲೆ ದೇಗುಲಕ್ಕೆ ಸುಪ್ರೀಂ ಕೋರ್ಟ್ ಮಹಿಳೆಯರಿಗೆ ಪ್ರವೇಶ ಕಲ್ಪಿಸಿತ್ತು. ಸುಪ್ರಿಂ ತೀರ್ಪಿನ ವಿರುದ್ಧ ರೊಚ್ಚಿಗೆದ್ದ ಭಕ್ತರು ಮಹಿಳೆಯರನ್ನು ಯಾವುದೇ ಕಾರಣಕ್ಕೂ ದೇವಾಲಯಕ್ಕೆ ಬಿಡುವುದಿಲ್ಲವೆಂದು ಉಗ್ರವಾಗಿಯೇ ಪ್ರತಿಭಟಿಸಿದ್ದರು. ಅಲ್ಲದೇ ದೇವಾಲಯದ ಹುಂಡಿಗೆ ಯಾವೊಬ್ಬ ಹಿಂದುವೂ ಹಣ ಹಾಕಬಾರದೆಂಬ ಚಳುವಳಿಯನ್ನು ಸಹ ಪ್ರಾರಂಭಿಸಿದ್ದರು.
ಚಳುವಳಿ ಆರಂಭಿಸಿದ್ದರ ಪರಿಣಾಮ ಶಬರಿಮಲೆ ದೇವಾಲಯದ ಆದಾಯದಲ್ಲಿ ಭಾರೀ ಕುಸಿತ ಕಂಡಿದೆ. ದೇವಾಲಯದ ಹುಂಡಿಗಳಲ್ಲಿ ಭಕ್ತರು `ಶಬರಿಮಲೆ ರಕ್ಷಿಸಿ’ ಹಾಗೂ `ಸ್ವಾಮಿಯೇ ಶರಣಂ ಅಯ್ಯಪ್ಪ’ ಎನ್ನುವ ಚೀಟಿಗಳನ್ನು ಹುಂಡಿಗಳಲ್ಲಿ ತುಂಬಿಸಿದ್ದರಿಂದ ಸಂಗ್ರಹವಾಗಬೇಕಾಗಿದ್ದ ಹಣದ ಮೊತ್ತ ಕುಸಿತಗೊಂಡಿದೆ.
ಯಾವ ದಿನ ಎಷ್ಟು ಆದಾಯ?
ಕಳೆದ ಬಾರಿಗೆ ಹೋಲಿಸಿದರೆ ಒಟ್ಟು 44.5 ಲಕ್ಷ ರೂಪಾಯಿಗಳಷ್ಟು ಆದಾಯ ಕಡಿಮೆಯಾಗಿದೆ. ಕಳೆದ ವರ್ಷ ಮೊದಲ ದಿನವೇ ಬರೊಬ್ಬರಿ 8.42 ಲಕ್ಷ ರೂ. ಸಂಗ್ರಹವಾಗಿದ್ದರೆ, ಈ ಬಾರಿ 4.83 ಲಕ್ಷ ರೂ. ಸಂಗ್ರಹವಾಗಿದೆ. ಈ ಬಾರಿ ಎರಡನೇ ದಿನ 19.30 ಲಕ್ಷ ರೂ. ಸಂಗ್ರಹವಾಗಿದ್ದರೆ, ಕಳೆದ ಬಾರಿ ಈ ದಿನ 45.59 ಲಕ್ಷ ರೂ. ಸಂಗ್ರವಾಗಿತ್ತು. 2017ರಲ್ಲಿ ಮೂರನೇ ದಿನ 32.3 ಲಕ್ಷ ರೂ. ಸಂಗ್ರಹವಾಗಿದ್ದರೆ, ಈ ವರ್ಷ ಕೇವಲ 17.51 ಲಕ್ಷ ರೂ. ಮಾತ್ರ ಸಂಗ್ರಹವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv