ಬೆಂಗಳೂರು: ಶಾಸಕ ಶ್ರೀನಿವಾಸ್ ಗೌಡ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಯಡಿಯೂರಪ್ಪನವರು, ಯಾವ ವಿಚಾರವಾಗಿ ಮಾತನಾಡುತ್ತಿದ್ದೇನೆ ಅಂತ ಸ್ಪೀಕರ್ ಅವರಿಗೆ ತಿಳಿಸದೆ ಶ್ರೀನಿವಾಸ್ ಗೌಡ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಶಾಸಕರಾದ ಅಶ್ವಥ್ ನಾರಾಯಣ, ವಿಶ್ವನಾಥ್ ಅವರು ಅವರು 5 ಕೋಟಿ ರೂ. ಹಣವನ್ನು ತಂದು ನಮ್ಮ ಮನೆಯಲ್ಲಿ ಇಟ್ಟು ಹೋದರು ಎಂದು ಆರೋಪ ಮಾಡಿದ್ದಾರೆ. ಈ ಹಿಂದೆಯೂ ಇಂತಹ ಹೇಳಿಕೆ ನೀಡಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: 5 ಕೋಟಿ ನೀಡಿ ನನ್ನನ್ನು ಖರೀದಿಸಲು ಬಿಜೆಪಿ ಯತ್ನ: ಶ್ರೀನಿವಾಸ ಗೌಡ
ವಿಶ್ವಾನ ಮತಯಾಚನೆ ವೇಳೆ ಶಾಸಕರು ದುರುದ್ದೇಶದಿಂದ ಆರೋಪ ಮಾಡಿದ್ದಾರೆ. ಸಚಿವ ಸಾರಾ ಮಹೇಶ್ ಅವರು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಬಿಜೆಪಿಯವರು 28 ಕೋಟಿ ರೂ. ಆಫರ್ ಕೊಟ್ಟಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಪ್ರಮಾಣಿಕ ವ್ಯಕ್ತಿಯ ಬಗ್ಗೆ ಅಪಮಾನ ಮಾಡುವುದು ಅಕ್ಷಮ್ಯ ಅಪರಾಧ ಎಂದು ಗುಡುಗಿದರು. ಇದನ್ನೂ ಓದಿ: ಅವನ್ಯಾರು ನನಗೆ ಮಂತ್ರಿಗಿರಿ ಕೊಡೋಕೆ, ನಾನು ಸೇಲ್ ಆಗಿಲ್ಲ: ವಿಶ್ವನಾಥ್ ತಿರುಗೇಟು
ಸಚಿವ ಸಾ.ರಾ.ಮಹೇಶ್ ಅವರು ತಕ್ಷಣವೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕ್ಷೇತ್ರದ ಜನತೆ ಪಾಠ ಕಲಿಸುತ್ತಾರೆ. ಎಚ್.ವಿಶ್ವನಾಥ್ ಅವರು ಬಂದ ಮೇಲೆ ಸಚಿವರಿಂದ ದಾಖಲೆಗಳನ್ನು ಕೇಳಲಾಗುತ್ತದೆ ಹಾಗೂ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಅಸಮಾಧಾನ ಹೊರಹಾಕಿದರು.