ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ. ಸರ್ಕಾರಕ್ಕೆ ಕಿವಿ, ಕಣ್ಣು ಬಾಯಿ ಎನೂ ಇಲ್ಲ. ಇದು ಚರ್ಮಗೇಡಿ ಸರ್ಕಾರ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶತಮಾನದಲ್ಲಿ ಕಂಡು ಕೇಳರಿಯದ ಪ್ರವಾಹವನ್ನು ರಾಜ್ಯ ಎದುರಿಸಿದೆ. ಆದರೆ ಸರ್ಕಾರ ಈವರೆಗೂ ಪರಿಹಾರ ನೀಡಿಲ್ಲ. ದಾನಿಗಳು 95% ಸಂತ್ರಸ್ತರ ನೆರವಿಗೆ ದಾನ ಮಾಡಿದ್ದರೆ ಸರ್ಕಾರ ಐದು ಪರ್ಸೆಂಟ್ ಕೊಟ್ಟಿದೆ. ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ. ಸರ್ಕಾರಕ್ಕೆ ಕಿವಿ, ಕಣ್ಣು ಬಾಯಿ ಎನೂ ಇಲ್ಲ. ಇದು ಚರ್ಮಗೇಡಿ ಸರ್ಕಾರ ಎಂದು ಹರಿಹಾಯ್ದರು.
ಸರ್ಕಾರ ಪರಿಹಾರ ನೀಡದ ಹಿನ್ನಲೆಯಲ್ಲಿ ಮೂರು ದಿನಗಳಲ್ಲಿ ಜಮಖಂಡಿಯಿಂದ ಬೆಳಗಾವಿಗೆ ಬಂದಿದ್ದೇವೆ. ನಿತ್ಯವೂ ನಲವತ್ತೈದರಿಂದ ಐವತ್ತು ಕಿ.ಮೀ ನಡೆದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೂ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯದ ಸಿಎಂ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಚಂದ್ರಯಾನ ವೀಕ್ಷಣೆಗೆ ಮೋದಿ ಬಂದಾಗಲೂ ನೆರೆ ಹಾವಳಿ ಕುರಿತು ಕೇಳುವ ಸೌಜನ್ಯ ತೋರಲಿಲ್ಲ ಎಂದು ಕಿಡಿಕಾರಿದರು.
25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಜನ ಆಯ್ಕೆ ಮಾಡಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಪ್ರವಾಹಕ್ಕೆ ಒಂದು ಬಿಡಿಗಾಸು ಕೊಟ್ಟಿಲ್ಲ. ಹಿಂದಿನ ಬಾರಿ ಪ್ರವಾಹ ಬಂದಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ಮಾಡಿ ಪರಿಹಾರ ಕೊಟ್ಟಿದ್ದರು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿದರು.