– ನನ್ನ ಅಭಿವೃದ್ಧಿ ಕಾರ್ಯಗಳನ್ನ ಮೊಯ್ಲಿ ತಮ್ಮದೆಂದು ಹೇಳುತ್ತಿದ್ದಾರೆ
– ಕೇಂದ್ರದಲ್ಲಿ ಶಕ್ತಿಶಾಲಿ ಸರ್ಕಾರಕ್ಕಾಗಿ ಮೋದಿಗೆ ಮತ ನೀಡಿ
ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ವಿರುದ್ಧವಾಗಿ ಮತ ಚಲಾವಣೆ ಮಾಡುವಂತೆ ಈಗಾಗಲೇ ತೀರ್ಮಾನ ಮಾಡಿರುವುದರಿಂದ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಲು ಪಕ್ಷ ಹೇಳಿದರೆ ಪ್ರಚಾರ ಮಾಡ್ತೇನೆ ಎಂದು ಮಾಜಿ ಸಿಎಂ ಎಸ್ಎಂ ಕೃಷ್ಣ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲಿ ಪ್ರಚಾರ ಮಾಡಿ ಎಂದರೆ ನಾನು ಅಲ್ಲಿಗೆ ಹೋಗುತ್ತೇನೆ. ಇವತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡು ಎಂದು ಹೇಳಿದ್ದಾರೆ. ಹೀಗಾಗಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದರು.
ಇದೇ ವೇಳೆ ಮಹಾಘಟಬಂಧನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 25 ಪಕ್ಷಗಳು ಸೇರಿ ಸರ್ಕಾರ ಮಾಡಿದರೆ ಎಂತಹ ವೈವಿಧ್ಯಮಯ ಸರ್ಕಾರ ಮಾಡಲು ಸಾಧ್ಯ ನೀವೇ ಒಮ್ಮೆ ಯೋಚಿಸಿ. ಕೇಂದ್ರದಲ್ಲಿ ಯಾವಾಗಲೂ ಗಟ್ಟಿ, ಶಕ್ತಿ ಶಾಲಿ ಸರ್ಕಾರ ಇರಬೇಕು. ಹೀಗಾಗಿ ಮೋದಿಯವರ ಗಟ್ಟಿ ಸರ್ಕಾರ ಹೇಗಿದೆ ಎಂಬುದನ್ನು ಎಂದು ಅರ್ಥಮಾಡಿಕೊಂಡು ಮತ ಚಲಾಯಿಸಿ, ಮುಂದಿನ 5 ವರ್ಷವೂ ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂಬುದೇ ತಮ್ಮ ಕೋರಿಕೆ ಎಂದರು.
ಮೊಯ್ಲಿ ವಿರುದ್ಧ ಅಸಮಾಧಾನ: ಎತ್ತಿನಹೊಳೆ ಯೋಜನೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹಾಗೂ ವಿಮಾನ ನಿಲ್ದಾಣಕ್ಕೆ ಕೇಂಪೇಗೌಡ ಹೆಸರಿಡಲು ಶ್ರಮಿಸಿದ್ದ ತಾನು ಎಂದು ವೀರಪ್ಪಮೊಯ್ಲಿ ಹೇಳಿಕೊಳ್ಳುತ್ತಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕೆಲ ಅಪಪ್ರಚಾರಗಳು ನಡೆಯುತ್ತಿದ್ದಾರೆ. ಸುಳ್ಳಿನ ಸರಮಾಲೆಗಳ ಮೂಲಕ ವೀರಪ್ಪ ಮೊಯ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ದು ನಾನು. ಆದರೆ ಮೊಯ್ಲಿ ತಾವು ಮಾಡಿದ್ದು ಎನ್ನುತ್ತಿದ್ದಾರೆ. ಜನ ಮುರ್ಖರು ಎಂದು ತಿಳಿದುಕೊಂಡು ಹಾಗೇ ಹೇಳಿದ್ದಾರಯೇ ಎಂಬುವುದು ತಿಳಿಯುತ್ತಿಲ್ಲ. ಜನ ಬುದ್ಧಿವಂತಾರಗಿದ್ದು ಚರಿತ್ರೆಯನ್ನ ತಿಳಿದುಕೊಳ್ಳುತ್ತಾರೆ. 2001-2002 ರಲ್ಲಿ ದೆಹಲಿಗೆ ಹೋಗಿ ಪ್ರಧಾನಿ ವಾಜಪೇಯಿ ರನ್ನ ಭೇಟಿ ಮಾಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಮನವಿ ಮಾಡಿದ್ದೆ. ಆಗ ಬಿಜೆಪಿಯವರು ಎಸ್ಎಂ ಕೃಷ್ಣ ಕಾಂಗ್ರೆಸ್ ಸಿಎಂ ಬರಬೇಡಿ ಎಂದಿದ್ದರು. ಅದನ್ನ ಕೇಳಿಸಿಕೊಂಡ ವಾಜಪೇಯಿ ಅವರು ಒಂದು ಕಿವಿಯಲ್ಲಿ ಕೇಳಿ ಸುಮ್ಮನಾದರು. ಕೊನೆಗೆ ಮತ್ತೊಮ್ಮೆ ನಾನು ದಿವಂಗತ ಅನಂತ್ ಕುಮಾರ್ ಹಾಗೂ ನಿತಿನ್ ಗಡ್ಕರಿ ಮೂಲಕ ಮತ್ತೆ ಭೇಟಿ ಮಾಡಿದಾಗ ಬರಲು ಒಪ್ಪಿದರು. ಆದರೆ ಸೂಕ್ತ ರಕ್ಷಣೆ ಸಮಸ್ಯೆಯಿಂದ ದೇವನಹಳ್ಳಿ ಬದಲು ವಿಧಾನಸೌಧಕ್ಕೆ ಬಂದು ಒಂದು ಬಟನ್ ಒತ್ತುವ ಮೂಲಕ ಅಲ್ಲಿದಂಲೇ ವಿಮಾನ ನಿಲ್ದಾಣಕ್ಕೆ ಅಡಿಪಾಯ ಚಾಲನೆ ಹಾಕಿದರು. ಇದು ಚರಿತ್ರೆ, ಇತಿಹಾಸ ಎಂದರು.
ಆಗ ವೀರಪ್ಪಮೊಯ್ಲಿ ಎಲ್ಲಿದ್ದರು ಎನ್ನುವುದೇ ನನಗೆ ಗೊತ್ತಿಲ್ಲ. ಹೀಗಾಗಿ ಜನರಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಕರಾವಳಿಯವರು ಅತಿ ಬುದ್ದಿವಂತರು ಎಂಬುವುದನ್ನು ತೋರಿಸುವ ಪ್ರಯತ್ನ ಮಾಡಬೇಡಿ. ಚರಿತ್ರೆಗಳನ್ನ ತಿರುಚಿ ಬೇರೆ ವ್ಯಾಖ್ಯಾನ ನೀಡುವುದು ಸಾಧುವಲ್ಲ ಎಂದು ವೀರಪ್ಪ ಮೊಯ್ಲಿಗೆ ಟಾಂಗ್ ನೀಡಿದರು. ಕಳೆದ ಬಾರಿ ಕೇಂಪೇಗೌಡ ವಂಶಸ್ಥರಾದ ಬಚ್ಚೇಗೌಡರನ್ನ ಯಾವ ಕಾರಣಕ್ಕೆ ಸೋಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಬಚ್ಚೇಗೌಡರನ್ನ ಬಿಟ್ಟು ಎಲ್ಲಿಂದಲೋ ಬಂದವರನ್ನ ಎರಡನೇ ಸಲ ಗೆಲ್ಲಿಸಿದ್ದು, ಇದು ಈ ಮಣ್ಣಿಗೆ ಕಳಂಕ ಬಗೆದಂತೆ ಎಂದು ಬಣ್ಣಿಸಿದರು. ಈ ಬಾರಿಯಾದರು ಬಚ್ಚೇಗೌಡ ರನ್ನ ಗೆಲ್ಲಿಸಿ ಮೋದಿ ಕೈಯನ್ನ ಬಲಪಡಿಸುವಂತೆ ಮನವಿ ಮಾಡಿಕೊಂಡರು.