ಕೀವ್: ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ತಡೆಯದಿದ್ದರೇ ಯಾರೂ ಸುರಕ್ಷಿತವಾಗಿರುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷರ ಪತ್ನಿ ಒಲೆನಾ ಝೆಲೆನ್ಸ್ಕಾ ತಿಳಿಸಿದರು.
ಪುಟ್ಟ ರಾಷ್ಟ್ರ ಉಕ್ರೇನ್ನ ಮೇಲೆ ರಷ್ಯಾ ವೈಮಾನಿಕ ದಾಳಿ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ದೇಶ ತೊರೆಯುತ್ತಿದ್ದಾರೆ. ಈ ಬಗ್ಗೆ ಒಲೆನಾ ಝೆಲೆನ್ಸ್ಕಾ ಭಾವನಾತ್ಮಕ ಪತ್ರವನ್ನು ಬರೆದ ಅವರು, ಪರಮಾಣು ಯುದ್ಧವನ್ನು ಪ್ರಾರಂಭಿಸುವ ಬೆದರಿಕೆ ಹಾಕಿರುವ ಪುಟಿನ್ ಅವರನ್ನು ನಾವು ತಡೆಯದಿದ್ದರೆ, ನಮ್ಮಲ್ಲಿ ಯಾರಿಗೂ ಸುರಕ್ಷಿತ ಸ್ಥಳವಿಲ್ಲ ಎಂದು ಬರೆದಿದ್ದಾರೆ.
ಯುದ್ಧದ ಸ್ಥಿತಿಗತಿಗಳ ಬಗ್ಗೆ ವಿವರಿಸಿದ ಅವರು, ಫೆಬ್ರವರಿ 24ರಂದು ರಷ್ಯಾದ ಆಕ್ರಮಣದ ಘೋಷಣೆಯಿಂದ ನಾವೆಲ್ಲರೂ ಎಚ್ಚರಗೊಂಡಿದ್ದೇವೆ. ರಷ್ಯಾ ಟ್ಯಾಂಕ್ಗಳು ಉಕ್ರೇನಿನ ಗಡಿಯನ್ನು ದಾಟಿದವು. ವಿಮಾನಗಳು ನಮ್ಮ ವಾಯುಪ್ರದೇಶವನ್ನು ಪ್ರವೇಶಿಸಿದವು. ಕ್ಷಿಪಣಿ ಲಾಂಚರ್ಗಳು ನಮ್ಮ ನಗರಗಳನ್ನು ಸುತ್ತುವರೆದವು. ಜೊತೆಗೆ ಉಕ್ರೇನಿನ ನಾಗರಿಕರ ಸಾಮೂಹಿಕ ಹತ್ಯೆಯೂ ನಡೆದಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಸೂರ್ಯಕಾಂತಿ ಮಾತ್ರ ಅಲ್ಲ ಬೇರೆ ಖಾದ್ಯ ತೈಲ ಖರೀದಿಗೆ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ: ನಿರ್ಮಲಾ ಸೀತಾರಾಮನ್
ಬಾಂಬ್ನಿಂದ ರಕ್ಷಣೆ ಪಡೆಯಲು ಮಹಿಳೆಯರು ಮತ್ತು ಮಕ್ಕಳು ಬಂಕರ್ಗಳಲ್ಲಿ ದಿನದೂಡುತ್ತಿದ್ದಾರೆ. ಇದು ಯುದ್ಧದ ಭೀಕರ ಸನ್ನಿವೇಶ. ನಡುಗುವ ಭೂಮಿಯಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಭೂಗತ ಬಂಕರ್ಗಳಲ್ಲಿ ಇನ್ಸುಲಿನ್ ಕೊಡುವುದು, ಸತತ ಬಾಂಬ್ಗಳು ಭೋರ್ಗರೆಯುತ್ತಿದ್ದಾಗ ಅಸ್ತಮಾ ರೋಗಿಗಳಿಗೆ ಔಷಧಿ ಕೊಡುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೇ ಗೊತ್ತು. ಕ್ಯಾನ್ಸರ್ ಪೀಡಿತರ ಕಿಮೊಥೆರಪಿ, ರೇಡಿಯೇಶನ್ ಚಿಕಿತ್ಸೆಗೆ ಅವಕಾಶವೇ ಆಗುತ್ತಿಲ್ಲ. ಇದನ್ನೂ ಓದಿ: ಕೋಲಾರದಲ್ಲಿ ತಪ್ಪಿತು ಮಹಾ ದುರಂತ – ಕೂದಲೆಳೆ ಅಂತರದಲ್ಲಿ ನೂರಾರು ಜನ ಪಾರು
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿ 14 ದಿನಗಳಾಗಿವೆ. ಎರಡೂ ದೇಶಗಳ ನಡುವೆ ಮೂರು ಬಾರಿ ಮಾತುಕತೆ ನಡೆದಿದ್ದರೂ ಈವರೆಗೆ ಯಾವುದೇ ಪ್ರಯೋಜನ ಸಿಕ್ಕಿಲ್ಲ. ಕೀವ್ ಮತ್ತು ಇತರ ಪ್ರಮುಖ ನಗರಗಳಿಂದ ಜನರನ್ನು ಸ್ಥಳಾಂತರಕ್ಕಾಗಿ ಅವಕಾಶ ಕಲ್ಪಿಸಲು ಕದನ ವಿರಾಮ ಘೋಷಿಸಿದೆ. ಯುದ್ಧದಿಂದಾಗಿ ನಾಗರಿಕರ ಸಂಚಾರಕ್ಕೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ನಾಗರಿಕರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.