ಕೀವ್: ಯುದ್ಧಗ್ರಸ್ಥ ಉಕ್ರೇನ್ ತೊರೆಯಲು ಭಾರತೀಯರು ಮಾತ್ರವಲ್ಲ, ಇತರ ದೇಶದವರು ಕೂಡಾ ಹರಸಾಹಸ ಪಡುತ್ತಿದ್ದಾರೆ. ಭಾರತದಿಂದ ಆಪರೆಷನ್ ಗಂಗಾ ಭಾರತೀಯರನ್ನು ಕರೆತರಲು ಎಲ್ಲಾ ರೀತಿಯಾಗಿ ಶ್ರಮವಹಿಸುತ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಭೀಕರ ಯುದ್ಧದ ನಡುವೆಯೂ ಉಕ್ರೇನ್ ತೊರೆಯುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾನೆ.
ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್ನಿಂದ ಭಾರತೀಯರನ್ನು ಕರೆತರಲಾಗುತ್ತಿದೆ. ಭಾರತದ ವ್ಯಕ್ತಿ ಗಗನ್ ಉಕ್ರೇನ್ ಬಿಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಏಕೆಂದರೆ ನನ್ನ ಪತ್ನಿ ತುಂಬು ಗರ್ಭಿಣಿ. ಆಕೆ ಭಾರತೀಯಳಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಆಕೆಯನ್ನು ಉಕ್ರೇನ್ನಲ್ಲಿ ಬಿಟ್ಟು ಬರಲು ಸಾಧ್ಯವಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮುಗಿಬಿದ್ದ ರಷ್ಯಾ – ಬಾಂಬ್, ಕ್ಷಿಪಣಿ ದಾಳಿಗೆ ಕೀವ್ ನಗರ ತತ್ತರ
ನಾನೊಬ್ಬ ಭಾರತೀಯ ಪ್ರಜೆ. ಆಪರೇಷನ್ ಗಂಗಾ ಕಾರ್ಯಾಚರಣೆ ಭಾಗವಾಗಿ ನಾನು ಭಾರತ ತಲುಪಬಹುದು. ಆದರೆ ಆಪರೇಷನ್ ಗಂಗಾದಲ್ಲಿ ಕೇವಲ ಭಾರತೀಯರನ್ನು ಮಾತ್ರವೇ ಸ್ಥಳಾಂತರಿಸಲಾಗುವುದು ಎಂದಿದ್ದಾರೆ. ನನ್ನ ಪತ್ನಿ 8 ತಿಂಗಳು ತುಂಬಿರುವ ಗರ್ಭಿಣಿ. ಆಕೆ ಉಕ್ರೇನ್ನವಳು. ಈ ಸಂದರ್ಭದಲ್ಲಿ ಆಕೆಯನ್ನು ಬಿಟ್ಟು ನನ್ನ ದೇಶಕ್ಕೆ ಹೇಗೆ ಹೋಗಲಿ ಎಂದು ಗಗನ್ ಮಾಧ್ಯಮಗಳ ಮುಂದೆ ತಮ್ಮ ಸಂಕಷ್ಟವನ್ನು ತಿಳಿಸಿದ್ದಾರೆ.
ಈ ಭೀಕರ ಯುದ್ಧದ ಸಂದರ್ಭದಲ್ಲಿ ನಾನು ಪತ್ನಿಯನ್ನು ಸುರಕ್ಷಿತ ಪ್ರದೇಶಕ್ಕೆ ಕರೆದುಕೊಂಡು ಹೋಗುವ ಅಗತ್ಯವಿದೆ. ಈಗಾಗಲೇ ನಾವು ಕೀವ್ನಿಂದ ಪಾರಾಗಿ ಬಂದಿದ್ದೇವೆ. ಇದೀಗ ಪತ್ನಿಯನ್ನು ಕರೆದುಕೊಂಡು ಪೋಲೆಂಡ್ ಹೋಗಲು ನಿರ್ಧರಿಸಿದ್ದೇನೆ ಎಂದು ಗಗನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್
ರಷ್ಯಾ ಉಕ್ರೇನ್ ಮೇಲೆ ಫೆಬ್ರವರಿ 24ರಂದು ಯುದ್ಧ ಘೋಷಿಸಿತ್ತು. ಈ ಸಂದರ್ಭದಲ್ಲಿ ಉಕ್ರೇನ್ ಸರ್ಕಾರ ನಾಗರಿಕ ವಿಮಾನಗಳಿಗೆ ವಾಯು ಪ್ರದೇಶವನ್ನು ಮುಚ್ಚಿಹಾಕಿತು. ಭಾರತೀಯರು ಮಾತ್ರವಲ್ಲದೇ ಅನೇಕ ಇತರ ದೇಶಗಳ ಪ್ರಜೆಗಳು ಹಾಗೂ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡರು. ಈ ಸಂದರ್ಭದಲ್ಲಿ ಭಾರತ ಸರ್ಕಾರ ಭಾರತೀಯರ ರಕ್ಷಣೆಗೆ ಆಪರೇಷನ್ ಗಂಗಾ ಕಾರ್ಯಾಚರಣೆ ಪ್ರಾರಂಭಿಸಿತು. ಇದೀಗ ಸಾವಿರಾರು ಭಾರತೀಯರು ತಮ್ಮ ತಾಯ್ನಾಡು ತಲುಪಿದ್ದು, ಉಕ್ರೇನ್ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನೂ ಕರೆದುಕೊಂಡು ಬರುವಲ್ಲಿ ಆಪರೇಷನ್ ಗಂಗಾ ಕೆಲಸ ಮಾಡುತ್ತಿದೆ.