ನವದೆಹಲಿ: ಉಕ್ರೇನ್ನಲ್ಲಿ ಭಾರತೀಯ ಪ್ರಜೆಗಳು ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆತರುವ ಪ್ರಯತ್ನಗಳನ್ನು ನಿಲ್ಲಿಸುವುದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಅಭಿಯಾನವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಉದಯೋನ್ಮುಖ ಶಕ್ತಿಯಾಗಿ ಬೆಳೆದಿದೆ. ಉಕ್ರೇನ್ನಿಂದ ಭಾರತೀಯರನ್ನು ವಾಪಸ್ ಕರೆತರುವ ಸಾಮರ್ಥ್ಯವೂ ನಮ್ಮ ಸರ್ಕಾರಕ್ಕಿದೆ. ಈ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖೆರ್ಸನ್ ನಗರ ರಷ್ಯಾ ವಶ, ಏಕಕಾಲದಲ್ಲಿ ಮೂರು ಕಡೆ ವೈಮಾನಿಕ ದಾಳಿ- 21 ಜನ ಸಾವು
ಸಶಸ್ತ್ರ ಪಡೆಗಳ ಶೌರ್ಯ ಮತ್ತು ಮೇಕ್ ಇನ್ ಇಂಡಿಯಾವನ್ನು ಪ್ರಶ್ನಿಸುವವರು ದೇಶವನ್ನು ಬಲಿಷ್ಠಗೊಳಿಸಲಾರರು ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಚುನಾವಣೆಗಳ ಆಕ್ರಮಣಕಾರಿ ಪ್ರಚಾರದ ನಡುವೆ, ಉಕ್ರೇನ್ ಬಿಕ್ಕಟ್ಟು ಮತ್ತು ಅಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಅವಸ್ಥೆಯು ಸರ್ಕಾರದ ಮೇಲೆ ವಿರೋಧದ ಅಲೆಯನ್ನು ಹುಟ್ಟುಹಾಕಿದೆ. ಉಕ್ರೇನ್ನಿಂದ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಪ್ರಧಾನಿ ಮೋದಿ ನೇತೃತ್ವದಲ್ಲಿ ಈವರೆಗೂ ನಾಲ್ಕು ಸಭೆಗಳು ನಡೆದಿವೆ. ಇದನ್ನೂ ಓದಿ: ಪಕ್ಕದಲ್ಲಿ ಬಾಂಬ್ ಬಿದ್ದರೂ ಊಟ, ವಸತಿ ನೀಡುತ್ತಿದೆ ಭಾರತೀಯ ರೆಸ್ಟೋರೆಂಟ್
ಉಕ್ರೇನ್ನಲ್ಲಿ ಮಂಗಳವಾರ ರಷ್ಯಾ ಸೇನಾ ಪಡೆ ನಡೆಸಿದ ಶೆಲ್ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾಗಿದ್ದಾರೆ. ಈ ಘಟನೆಯಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದು, ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ಒತ್ತಡ ಹೆಚ್ಚಾಗಿದೆ.