ಮಡಿಕೇರಿ: ಕೊಡಗಿನ ಯುವಕ ಹಾಗೂ ರಷ್ಯಾದ ಯುವತಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿ-ಪತಿಯಾದ ವಿಶೇಷ ಪ್ರಸಂಗ ನಡೆದಿದೆ.
ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್ ಈ ಅಪರೂಪದ ಮಂಗಳ ಕಾರ್ಯಕ್ಕೆ ಸಾಕ್ಷಿಯಾಗಿದೆ. ಸೊಮವಾರಪೇಟೆ ಸಮೀಪದ ನಂದಿಗುಂದ ಗ್ರಾಮದ ಚಿನ್ನಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಜಯಚಂದನ್ ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದಲ್ಲಿ ಯೋಗ ತರಬೇತುದಾರರಾಗಿದ್ದಾರೆ. ಇವರೊಂದಿಗೆ ಮಾಸ್ಕೊ ರಾಜ್ಯದ ಯುವತಿ ಮಿಲನಾ ಅವರು ಯೋಗ ತರಬೇತಿ ನೀಡುತ್ತಿದ್ದು, ಪರಸ್ಪರ ಪ್ರೀತಿಸಿ ಹಸೆಮಣೆಯೇರುವ ತೀರ್ಮಾನಕ್ಕೆ ಬಂದಿದ್ದರು.
ಗುರು, ಹಿರಿಯರು, ನೆಂಟರಿಷ್ಟರು ಮತ್ತು ಆಪ್ತರ ಸಮ್ಮುಖದಲ್ಲಿ ಭಾನುವಾರ ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಷ್ಯಾದ ಯುವತಿಗೆ ಭಾರತೀಯ ಸಂಸ್ಕೃತಿಯ ಅಚಾರ ವಿಚಾರದ ಬಗ್ಗೆ ಹೆಚ್ಚಿನ ಒಲವು ಇದ್ದು, ಭಾರತದ ಹುಡುಗನನ್ನು ಮದುವೆ ಮಾಡಿಕೊಳ್ಳುವ ಆಸೆ ಇತ್ತು. ಈ ಕುರಿತು ಹುಡುಗನ ಮನೆಯವರೊಂದಿಗೆ ಹೇಳಿಕೊಂಡಿದ್ದರು. ನಂತರ ಇಬ್ಬರ ಮನೆಯಲ್ಲೂ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.