ರಾಮನಗರ: ಹಾಡಹಗಲೇ ಜಿಲ್ಲೆಯ ಚನ್ನಪಟ್ಟಣದ ವಿವೇಕಾನಂದ ಬಡಾವಣೆಯಲ್ಲಿ ಮನೆಯ ಎದುರು ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 3 ಲಕ್ಷ ರೂ. ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಎರಡು ಬೈಕ್ಗಳಲ್ಲಿ ಬಂದ ಖದೀಮರು ಕೃತ್ಯವನ್ನು ಎಸಗಿದ್ದು, ವಿವೇಕಾನಂದ ಬಡಾವಣೆಯ ನಿವಾಸಿ ಬಸವರಾಜ್ ಅರಸ್ ಹಣ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಮದುವೆ ಕಾರ್ಯ ನಿಗದಿಯಾಗಿದ್ದ ನಿಮಿತ್ತ ಸ್ನೇಹಿತರಿಂದ ಸಾಲ ಪಡೆದುಕೊಂಡು ಬಸವರಾಜ್ ಹಣ ತಂದಿದ್ದರು. ಈ ವೇಳೆ ಕಾರಿನಲ್ಲೇ ಹಣವಿಟ್ಟು ಕುಟುಂಬ ಸದಸ್ಯರನ್ನು ಕರೆತರಲು ಮನೆಯೊಳಗೆ ತೆರಳಿದ್ದರು. ಈ ವೇಳೆ ಕ್ಷಣ ಮಾತ್ರದಲ್ಲಿ ಎರಡು ಬೈಕ್ಗಳಲ್ಲಿ ಆಗಮಿಸಿದ ನಾಲ್ವರು ಕಳ್ಳರು ಹಣ ದೋಚಿ ಪರಾರಿಯಾಗಿದ್ದಾರೆ.
ಖದೀಮರು ಹೋಂಡಾ ಯೂನಿಕಾರ್ನ್ ಹಾಗೂ ಬಜಾಜ್ ಪಲ್ಸರ್ ಬೈಕ್ಗಳಲ್ಲಿ ಬಂದಿದ್ದು, ಡ್ರೈವರ್ ಪಕ್ಕದ ಸೀಟಿನ ಗ್ಲಾಸ್ ಒಡೆದು ಹಣ ತೆಗೆದುಕೊಂಡಿದ್ದಾರೆ. ಈ ವೇಳೆ ಕಾರಿನ ಗ್ಲಾಸ್ ಒಡೆದ ಶಬ್ದ ಕೇಳಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಎರಡು ಬೈಕ್ ಗಳಲ್ಲಿ ಖದೀಮರು ಪರಾರಿಯಾಗಿದ್ದಾರೆ. ಪರಿಚಿತರಿಂದಲೇ ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಕಳ್ಳರ ಗುರುತು ಪತ್ತೆಗಾಗಿ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.