ದಾವಣಗೆರೆ: ತ್ರಿಬಲ್ ಆರ್ ಸಿನಿಮಾ ಭಾರತದಾತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೆ ದಾವಣಗೆರೆಯಲ್ಲಿ ಸಿನಿಮಾ ಪ್ರದರ್ಶನದ ವೇಳೆ ತಾಂತ್ರಿಕ ದೋಷ ಕಂಡುಬಂದು ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆ ಇಡೀ ಚಿತ್ರಮಂದಿರದ ಗಾಜನ್ನು ಪುಡಿ-ಪುಡಿ ಮಾಡಿರುವ ಘಟನೆ ಶುಕ್ರವಾರ(ನಿನ್ನೆ) ರಾತ್ರಿ ಜಗಳೂರಿನ ಭಾರತ ಚಿತ್ರಮಂದಿರದಲ್ಲಿ ನಡೆದಿದೆ.
ಜಗಳೂರು ತಾಲೂಕಿನ ಭಾರತ ಚಿತ್ರಮಂದಿರದಲ್ಲಿ ಕಳೆದ ದಿನ ಬೆಳಗ್ಗೆಯಿಂದ ಮೂರ್ನಾಲ್ಕು ಶೋ ತ್ರಿಬಲ್ ಆರ್ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿತ್ತು. ಕಳೆದ ದಿನ ಮೂರನೇ ಶೋ ಪ್ರದರ್ಶನದ ವೇಳೆ ತಾಂತ್ರಿಕ ದೋಷದಿಂದ ವೀಡಿಯೋ ಕಟ್ ಕಟ್ ಆಗಿ ಬರುವುದಲ್ಲದೆ ಸೌಂಡ್ ಎಫೆಕ್ಟ್ ಬಾರದಿರುವುದಕ್ಕೆ ಅಭಿಮಾನಿಗಳು ಕೋಪಗೊಂಡಿದ್ದಾರೆ. ಪರಿಣಾಮ ಚಿತ್ರಮಂದಿರದ ಪಿಓಪಿ ಶೀಟ್ ಹಾಗೂ ಕೆಲವು ವಸ್ತುಗಳನ್ನು ಮುರಿದು ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್
ಅಭಿಮಾನಿಗಳ ಗಲಾಟೆಯಿಂದ ಚಿತ್ರಮಂದಿರದ ಸಿಬ್ಬಂದಿ ಕ್ಷಮೆಯಾಚಿಸುವ ಮೂಲಕ ಅಂದಿನ ರಾತ್ರಿಯ ಶೋ ರದ್ದು ಮಾಡಿದ್ದಾರೆ. ಅಲ್ಲದೇ ಟಿಕೆಟ್ ದರವನ್ನು ವಾಪಸ್ ನೀಡಿ ಅಭಿಮಾನಿಗಳನ್ನು ಕಳುಹಿಸಿದ್ದಾರೆ. ಇದಲ್ಲದೆ 20 ರಿಂದ 30 ಕಿಲೋಮೀಟರ್ಗಳು ಕ್ರಮಿಸಿ ಚಿತ್ರ ವೀಕ್ಷಿಸಲು ಆಗಮಿಸಿದ್ದ ಅಭಿಮಾನಿಗಳು ನಿರಾಸೆಯಿಂದ ಮನೆ ಕಡೆ ಮುಖ ಮಾಡಿದ್ದಾರೆ.