-ಕೊಲೆಯ ಹಿಂದೆ ಅಕ್ರಮ ಸಂಬಂಧ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಹಲಸೂರು ಸಿಗ್ನಲ್ ನಲ್ಲಿ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ರೌಡಿಶೀಟರ್ ನನ್ನ ಆಟೋದಲ್ಲಿ ಬಂದ ನಾಲ್ವರ ಗ್ಯಾಂಗ್ ಒಂದೇ ಏಟಿಗೆ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪ್ರಕಾಶ್ ಯಾನೆ ಕಾಶಿ ಕೊಲೆಯಾದ ರೌಡಿಶೀಟರ್. ಈತ ಹಲಸೂರಿನ ಮರ್ಫಿ ಟೌನ್ ನಿವಾಸಿಯಾಗಿದ್ದು, ಪೈಂಟರ್ ಕೆಲಸ ಮಾಡಿಕೊಂಡಿದ್ದನು. ಕೊಲೆಯಾದ ಕಾಶಿ ಮೇಲೆ ಕೊಲೆ ಕೇಸ್ ಸೇರಿ ಹಲವು ಕೇಸ್ ಗಳಿದ್ದವು. ಕೊಲೆ ಕೇಸಿನಲ್ಲಿ ಒಮ್ಮೆ ಹಲಸೂರು ಪೊಲೀಸರು ಗೂಂಡಾ ಆ್ಯಕ್ಟ್ ಕೂಡ ಜಾರಿ ಮಾಡಿದ್ದರು.
ಕೊಲೆಯಾದ ರೌಡಿಶೀಟರ್ ಪ್ರಕಾಶ್ ಇತ್ತೀಚೆಗಷ್ಟೆ ಜೈಲಿನಿಂದ ಆಚೆ ಬಂದಿದ್ದನು. ಲಾಲು ಲಾರೇನ್ಸ್ ಗೂ ಪ್ರಕಾಶ್ಗೂ ವೈಷಮ್ಯವಿತ್ತು. ಕೊಲೆಯಾದ ರೌಡಿಶೀಟರ್ ಗೆಳೆಯ ಭರತ್ ಲಾರೆನ್ಸ್ ಮೊದಲನೇ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಭರತ್ಗೆ ರೌಡಿಶೀಟರ್ ಲಾರೇನ್ಸ್ ಆಗಾಗ ಧಮ್ಕಿ ಹಾಕುತ್ತಿದ್ದನು. ಅಷ್ಟೇ ಅಲ್ಲದೆ ಭರತ್ ಮೇಲೆ ಹಲ್ಲೆ ಮಾಡುವುಕ್ಕೆ ಹೋದಾಗಲೆಲ್ಲ ಕೊಲೆಯಾದ ಪ್ರಕಾಶ್, ಭರತ್ ಬೆನ್ನಿಗೆ ನಿಲ್ಲುತ್ತಿದ್ದನು. ಅದೇ ದ್ವೇಷಕ್ಕೆ ರೌಡಿಶೀಟರ್ ಲಾರೇನ್ಸ್ ಮತ್ತು ಆತನ ಗ್ಯಾಂಗ್ ಸೋಮವಾರ ರಾತ್ರಿ ಪ್ರಕಾಶ್ಗೆ ರಾಡ್ನಿಂದ ತಲೆಗೆ ಒಂದೇ ಏಟು ನೀಡಿ ಮುಗಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿ ಪರಾರಿಯಾಗಿರುವ ನಟೋರಿಯಸ್ ರೌಡಿಶೀಟರ್ ಲಾರೇನ್ಸ್ ಆ್ಯಂಡ್ ಗ್ಯಾಂಗ್ಗೆ ಪೊಲೀಸರು ಬಲೆ ಬೀಸಿದ್ದಾರೆ. ರೌಡಿಶೀಟರ್ ಲಾರೇನ್ಸ್ ಮೇಲೆ ಕೊಲೆ, ಕೊಲೆಯತ್ನ ಸೇರಿ ಒಟ್ಟು 25 ಹೆಚ್ಚು ಪ್ರಕರಣಗಳು ದಾಖಲಾಗಿವೆ.