ದರ್ಶನ್‌ಗೆ ನಿಲ್ಲೋಕಾಗ್ತಿಲ್ಲ… ಕೂರೋಕಾಗ್ತಿಲ್ಲ – 3 ತಿಂಗಳ ಮೆಡಿಕಲ್ ಬೇಲ್‌ಗೆ ಮನವಿ; ಎಸ್‌ಪಿಪಿ ಆಕ್ಷೇಪ

Public TV
2 Min Read
darshan 1 2

– ದರ್ಶನ್ ಪರ ವಕೀಲರ ವಾದ ಏನು?
– ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲ ಎಂದ ಜಡ್ಜ್
– ನಾಳೆಗೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ದರ್ಶನ್ (Darshan) ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ನಿಲ್ಲೋಕೆ ಮತ್ತು ಕೂರೋದಿಕ್ಕೆ ಆಗ್ತಿಲ್ಲ. ಅವರ ನೋವು ಅವರಿಗೇ ಗೊತ್ತು ಎಂದು ಜಾಮೀನು ಅರ್ಜಿ ವಿಚಾರಣೆ ವೇಳೆ ಆರೋಪಿ ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ಬಳ್ಳಾರಿ ಜೈಲಲ್ಲಿ ಬೆನ್ನುನೋವಿನ ಸಮಸ್ಯೆಯಿಂದ ಬಳಲ್ತಿರುವ ನಟ ದರ್ಶನ್ ಸರ್ಜರಿಗಾಗಿ ವೈದ್ಯಕೀಯ ಜಾಮೀನು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್, ಆದೇಶವನ್ನು ಬುಧವಾರ ಬೆಳಗ್ಗೆ 10:30ಕ್ಕೆ ಕಾಯ್ದಿರಿಸಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಮಂಗಳವಾರ ವಾದ-ಪ್ರತಿವಾದವನ್ನು ಆಲಿಸಿತು. ಇದನ್ನೂ ಓದಿ: ದರ್ಶನ್‌ ಮಧ್ಯಂತರ ಜಾಮೀನು ಆದೇಶ ನಾಳೆಗೆ

darshan renukaswamy pavithra gowda

ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ದರ್ಶನ್ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಹೀಗೆ ಬಿಟ್ಟರೆ ಪರಿಸ್ಥಿತಿ ಗಂಭೀರವಾಗಲಿದೆ. ದರ್ಶನ್ ಸಮಸ್ಯೆ ಅವರಿಗೆ ಮಾತ್ರ ಗೊತ್ತು, ನಡಿಯೋಕೆ ಆಗಲ್ಲ.. ಕೂರೋದಿಕ್ಕೆ ಆಗಲ್ಲ. ಅವರಿಗೆ ಸಾಂಪ್ರದಾಯಿಕ/ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿದರು.

ಮೈಸೂರಿನ ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಆಗಲು ಬಯಸಿದ್ದಾರೆ. ದರ್ಶನ್ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಡ. ಮೈಸೂರಲ್ಲಿ ಚಿಕಿತ್ಸೆ ಪಡೆಯುವುದರಿಂದ ಪ್ರಾಸಿಕ್ಯೂಷನ್ ಸಾಕ್ಷಿಗೂ ಸಮಸ್ಯೆ ಆಗಲ್ಲ. ಕೋರ್ಟ್ ಷರತ್ತು ವಿಧಿಸಿ, 3 ತಿಂಗಳು ಮಧ್ಯಂತರ ಜಾಮೀನು ಕೊಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು. ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಸಾವಿರಾರು ಮರಗಳ ಬಲಿ ಆರೋಪ; ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ ಕೊಟ್ಟ ಅರಣ್ಯ ಸಚಿವ

ಎಸ್‌ಪಿಪಿ ಪ್ರಸನ್ನಕುಮಾರ್ ಪ್ರತಿವಾದ ಮಂಡಿಸಿ, ಮೆಡಿಕಲ್ ಬೋರ್ಡ್‌ನಲ್ಲಿ ಪರೀಕ್ಷೆ ಮಾಡಿಸೋಣ. ವಿಕ್ಟೋರಿಯಾ/ಬೌರಿಂಗ್‌ನಲ್ಲಿ ಪರೀಕ್ಷೆ ಮಾಡಿಸಬಹುದು. ಮಂಡಳಿ ವರದಿ ಆಧರಿಸಿ ನಿರ್ಣಯ ತೆಗೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆ ಬದಲು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಆಗಬೇಕು ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಗ್ಯದ ವಿಚಾರವಾಗಿ ನಿರ್ಲಕ್ಷ್ಯ ಸಲ್ಲ. ಆರೋಗ್ಯ ಎಲ್ಲರ ಹಕ್ಕು. 3 ತಿಂಗಳು ಜಾಮೀನು ಕೇಳೋದು ಸೂಕ್ತ ಅಲ್ಲ ಎಂದು ನಾಳೆಗೆ ಆದೇಶ ಕಾಯ್ದಿರಿಸಿದರು.

Share This Article