ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು 20 ಗೇಟ್ಗಳ ಮೂಲಕ ನದಿಗೆ ಬಿಡಲಾಗಿದೆ. ಇದರಿಂದ ಕಂಪ್ಲಿ ಪಟ್ಟಣದ ಬಳಿಯ ಕಂಪ್ಲಿ, ಗಂಗಾವತಿ ಸೇತುವೆ ಮುಳುಗಡೆಗೆ ಕೆಲವು ಅಡಿಯಷ್ಟೇ ಬಾಕಿಯಿದೆ.
ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಸಂಪರ್ಕದ ಕೊಂಡಿಯಾದ ಕಂಪ್ಲಿ ಕೋಟೆಯ ತುಂಗಾಭದ್ರ ನದಿಯಲ್ಲಿ ಉಕ್ಕಿ ಬರುತ್ತಿರುವ ನೀರನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಜನ ನದಿಯತ್ತ ಆಗಮಿಸಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಈ ಸೇತುವೆ ಮುಳುಗಡೆಯಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು. ಆದರೆ, ನಂತರ ಜಲಾಶಯ ಭರ್ತಿಯಾಗದೇ ಇದ್ದರಿಂದ ಈ ಸೇತುವೆ ಮುಳುಗಡೆ ಭೀತಿಯನ್ನು ಜನ ಕಂಡಿರಲಿಲ್ಲ. ಆದರೆ ಈ ವರ್ಷ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ.
ಕಂಪ್ಲಿ-ಕೋಟೆಯ ಹೊರವಲಯದ ಬಾಳೆ ತೋಟಗಳಿಗೆ ನೀರು ನುಗ್ಗಿದ್ದು, ಹೊಳೆ ಆಂಜನೇಯ ದೇವಸ್ಥಾನ ಜಲಾವೃತವಾಗುವ ಸಾಧ್ಯತೆಯಿದೆ. ಒಂದು ಕಡೆ ರೈತರಿಗೆ ಹರ್ಷವಾದರೆ, ಮತ್ತೊಂದು ಕಡೆ ನದಿ ಪಾತ್ರದ ಜನರಿಗೆ ಸಂಕಷ್ಟ ಎದುರಾದಂತಾಗಿದೆ. ನದಿಗೆ ನೀರು ಬಿಟ್ಟಿರುವುದನ್ನು ನೋಡಲು ಸುತ್ತಮುತ್ತಲ ಪ್ರದೇಶದ ಜನ ಆಗಮಿಸುತ್ತಿದ್ದಾರೆ. ಸೇತುವೆಯ ತಳಭಾಗದಲ್ಲಿ ನೀರು ಹರಿಯುತ್ತಿದೆ. ಇನ್ನೇನು ಸೇತುವೆ ಮೇಲೆ ನೀರು ಹರಿಯಲು ಕೆಲವು ಅಡಿ ಬಾಕಿಯಿದೆ.
ಸೇತುವೆ ಮುಳುಗಡೆಗೆ ಕೆಲವೆ ಅಡಿಗಳು ಬಾಕಿ ಇದ್ದರೂ ಭಾರೀ ಗಾತ್ರದ ವಾಹನಗಳ ಸಂಚಾರ ನಿಂತಿಲ್ಲ. ಆದರೆ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದ್ದು, ನದಿ ನೀರಿನಿಂದ ಸಾರ್ವಜನಿಕರು ದೂರ ಉಳಿಯಬೇಕೆಂದು ತಹಶೀಲ್ದಾರ್ ಶರಣಮ್ಮ ಸೂಚಿಸಿದ್ದಾರೆ.