– ತರಕಾರಿ ದರ ಇಳಿದ್ರೂ ಜನ ಬರ್ತಿಲ್ಲ
ಮೈಸೂರು: ಕೊರೊನಾ ಭೀತಿ ನಡುವೆ ಮೈಸೂರಿನ ಚಾಮುಂಡಿ ಬೆಟ್ಟದ ಮಹಾಬಲೇಶ್ವರ ಸ್ವಾಮಿಯ ರಥೋತ್ಸವ ನಡೆದಿದೆ. ಆದರೆ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿಲ್ಲ.
ಪಾಲ್ಗುಣ ಮಾಸ ಕೃಷ್ಣ ಪಕ್ಷದಲ್ಲಿ ಈ ರಥೋತ್ಸವ ನಡೆಯುತ್ತದೆ. ಆದರೆ ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರ ನಿರಾಸಕ್ತಿ ತೋರಿದ್ದಾರೆ. ರಥದ ಮುಂದೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಇದ್ದರು.
ಮೈಸೂರಿನ ಪ್ರಮುಖ ಪ್ರವಾಸಿತಾಣಗಳಾದ ಮೈಸೂರು ಅರಮನೆ, ಮೈಸೂರು ಮೃಗಾಲಯ ಇವತ್ತಿನಿಂದ ಮಾರ್ಚ್ 23 ರವರೆಗೆ ಬಂದ್ ಆಗಲಿದೆ. ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇನ್ನೂ ಭಾನುವಾರ ಬಂತು ಎಂದರೆ ಸಾಮಾನ್ಯವಾಗಿ ಮಾಂಸಹಾರ ಸೇವನೆ ಮಾಡುವವರು ಕಡ್ಡಾಯವಾಗಿ ಮಾಂಸದೂಟ ಮನೆಯಲ್ಲಿ ಮಾಡುತ್ತಾರೆ. ಹೀಗಾಗಿ ಮಾಂಸದ ಮಾರುಕಟ್ಟೆ ತುಂಬಾ ಡಿಮ್ಯಾಂಡ್ ಇರುತ್ತೆ. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಾಂಸಮಾರಾಟ ಕುಸಿದು ಹೋಗಿದೆ. ಮಾಂಸದ ಮಾರುಕಟ್ಟೆಯಲ್ಲಿ ಜನವೇ ಇಲ್ಲ. ಇದರಿಂದ ವ್ಯಾಪಾರ ಸಂಪೂರ್ಣ ಡಲ್ ಆಗಿದೆ.
ಇತ್ತ ತರಕಾರಿ ಬೆಲೆಗಳು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದ್ದರೂ ಕೊರೊನಾ ಭಯದಿಂದ ತರಕಾರಿ ಖರೀದಿಗೆ ಜನ ಬರುತ್ತಿಲ್ಲ. ಮೈಸೂರಿನ ದೇವರಾಜ ಮಾರುಕಟ್ಟೆಯ ತರಕಾರಿ ಬೀದಿಯಲ್ಲಿ ಬಹಳ ಕಡಿಮೆ ಗ್ರಾಹಕರು ಇದ್ದರು. ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯ ಗ್ರಾಹಕರು ಇಲ್ಲಿ ಇರುತ್ತಾರೆ. ಆದರೆ ಇವತ್ತು ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಆಗಿ ವ್ಯಾಪಾರ ಕುಸಿದಿದೆ.