ತುಮಕೂರು: ಪಾಳು ಬಾವಿಗೆ ಬಿದ್ದು ಮೇಲಕ್ಕೆ ಬಾರದೇ ಪರದಾಡುತ್ತಿದ್ದ ಅಪರೂಪದ ಪುನುಗು ಬೆಕ್ಕನ್ನು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ ಸಿಬ್ಬಂದಿ ರಕ್ಷಿಸಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದಲ್ಲಿ ನಡೆದಿದೆ.
ಅಮಲಗೊಂದಿ ಗ್ರಾಮದ ತೋಟದವೊಂದರ ಪಾಳು ಬಾವಿಯಲ್ಲಿ ಪುನುಗು ಬೆಕ್ಕು ಪತ್ತೆಯಾಗಿತ್ತು. ಕಾಡಂಚಿನ ಗ್ರಾಮವಾಗಿರುವುದರಿಂದ ಈ ಅಪರೂಪದ ಬೆಕ್ಕು ಕಾಣಿಸಿಕೊಂಡಿದೆ. ಬಹುತೇಕ ಕಾಡಿನಲ್ಲಿಯೇ ವಾಸಿಸುವ ಈ ಪ್ರಾಣಿ ಆಹಾರ ಅರಸಿ ನಾಡಿನತ್ತ ಬಂದಿತ್ತು. ಅಮಲಗೊಂದಿ ನಿವಾಸಿ ಮಂಜುನಾಥ್ ಪ್ರಸಾದ್ ಎಂಬುವರಿಗೆ ಸೇರಿದ ತೋಟದಲ್ಲಿದ್ದ ಪಾಳು ಬಾವಿಯಲ್ಲಿ ಈ ಪುನುಗು ಬೆಕ್ಕು ಬಿದ್ದಿತ್ತು. ಅಲ್ಲದೆ ಭಯಗೊಂಡು ಬಾವಿಯಿಂದ ಮೇಲಕ್ಕೆ ಬಾರದೇ ಪರದಾಡುತಿತ್ತು.
ಮುಂಜಾನೆ ತೋಟದ ಕಡೆ ಮಂಜುನಾಥ್ ಅವರು ಹೋಗಿದ್ದಾಗ ಬಾವಿಯಿಂದ ಶಬ್ದ ಕೇಳಿಬಂದಿದೆ. ಆಗ ಬಾವಿಯಲ್ಲಿ ಇಣುಕಿದಾಗ ಪುನುಗು ಬೆಕ್ಕನ್ನು ನೋಡಿದ್ದಾರೆ. ಬಳಿಕ ಪಾಳು ಬಾವಿಯೊಳಗೆ ಏಣಿ ಇಟ್ಟು ಬೆಕ್ಕು ರಕ್ಷಣೆಗೆ ಮುಂಜುನಾಥ್ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಗೆ ಮಾಹಿತಿ ತಿಳಿಸಿದ್ದಾರೆ. ಕೊನೆಗೆ ಸ್ಥಳಕ್ಕೆ ಬಂದ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ ಸಿಬ್ಬಂದಿ ಪುನುಗು ಬೆಕ್ಕನ್ನು ಬಾವಿಯಿಂದ ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ.
ನಂತರ ಪುನುಗು ಬೆಕ್ಕನ್ನು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬರಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv