ನವದೆಹಲಿ: ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದ ಬಳಿಕ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಂತದೊಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪ್ರತಿ ಮಗುವಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ಕೊಡದೇ ಬಲಿಷ್ಠ ಭಾರತದ ನಿರ್ಮಾಣವಾಗದು: ಕೇಜ್ರಿವಾಲ್
ಸುದ್ದಿಗೋಷ್ಠಿ ಸಂದರ್ಭದಲ್ಲಿ ಅತ್ಯಾಚಾರ ಮತ್ತು ಕೊಲೆಗಳ ಬಗ್ಗೆ ಪ್ರಸ್ತಾಪವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಿರ್ಭಯಾ ಪ್ರಕರಣದ ಬಳಿಕ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂಬ ಬೇಡಿಕೆಯು ವೇಗ ಪಡೆದುಕೊಂಡಿತು ಮತ್ತು ನಂತರ ಕಾನೂನು ಜಾರಿಗೆ ಬಂದಿತು. ಇಂತಹ ಪರಿಸ್ಥಿತಿಯಲ್ಲಿ ಅತ್ಯಾಚಾರದ ನಂತರ ಮಹಿಳೆಯರ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ದೇಶದಲ್ಲಿ ಅಪಾಯಕಾರಿ ಪ್ರವೃತ್ತಿಯಾಗಿ ಹೊರಹೊಮ್ಮಿದೆ ಎಂದರು.
ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ ತನ್ನ ವಿರುದ್ಧ ಸಾಕ್ಷಿಯಾಗುತ್ತಾಳೆ ಎಂದು ಅತ್ಯಾಚಾರಿ ಭಾವಿಸುತ್ತಾನೆ. ಹೀಗಾಗಿ ಅವನು ಅತ್ಯಾಚಾರ ಮಾಡಿ ಕೊಲೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾನೆ. ದೇಶಾದ್ಯಂತ ಬರುತ್ತಿರುವ ವರದಿಗಳು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ದೇಶದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ, ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಬಿಕ್ಕಟ್ಟಿನ ಸಮಯ, ನಾವು ಇದನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪ್ಪು ಸ್ಮರಣಾರ್ಥ ಮೈಸೂರಿನ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರೈ
ಇದೇ ವೇಳೆ ಪ್ರತಿಭಟನೆ ಸಂಬಂಧ ಮಾತನಾಡಿದ ಅವರು, ಪ್ರಜಾಪ್ರಭುತ್ವದೊಳಗೆ ಶಾಂತಿಯುತವಾಗಿ ರ್ಯಾಲಿ ನಡೆದರೆ ಸಾರ್ವಜನಿಕರು ಸೇರಿಕೊಂಡರೆ ಸರ್ಕಾರದ ಕಣ್ಣು ತೆರೆಸುತ್ತದೆ. ನಮ್ಮ ಹೋರಾಟಕ್ಕೆ ಸಾರ್ವಜನಿಕರು ಬೆಂಬಲ ನೀಡುತ್ತಿದ್ದಾರೆ. ಇದರರ್ಥ ಸರ್ಕಾರದ ನೀತಿಗಳಲ್ಲಿ ತಪ್ಪು ಇದೆ ಎಂದರ್ಥ. ಆಗ ಸರ್ಕಾರವು ಉತ್ತಮ ಆಡಳಿತಕ್ಕಾಗಿ ಸುಧಾರಣೆಗೆ ಅವಕಾಶವನ್ನು ಪಡೆಯುತ್ತದೆ. ಆದರೆ ಈ ಸರ್ಕಾರ ಅಹಂಕಾರದಿಂದ ಕೂಡಿರುವುದರಿಂದ ಅಹಂನಿಂದ ವರ್ತಿಸುತ್ತಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳಿಗೆ ಮುಕ್ತವಾಗಿ ಪ್ರತಿಭಟಿಸುವಷ್ಟು ಸ್ವಾತಂತ್ರ್ಯ ಇರಬೇಕು. ಅದರಿಂದ ಸರ್ಕಾರಕ್ಕೆ ಮಾತ್ರ ಲಾಭ. ಆದರೆ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳದ ದುರಹಂಕಾರದಲ್ಲಿ ಈ ನಾಯಕರು ಓಡಾಡುತ್ತಿದ್ದಾರೆ. ಅವರು ಕೇವಲ ಹಿಂದೂ-ಮುಸ್ಲಿಂ ಹೆಸರಿನಲ್ಲಿ ರಾಜಕಾರಣ ಮಾಡಬೇಕು ಎಂದು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.