ಬೆಂಗಳೂರು: 1981ರಲ್ಲಿ ಹಿಂದೆ ಕಾಲದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ‘ರಂಗನಾಯಕಿ’ ಸಿನಿಮಾ ಬಂದಿದ್ದು, ದಾಖಲೆ ನಿರ್ಮಿಸಿದ್ದೀಗ ಇತಿಹಾಸ. ಅದೇ ‘ರಂಗನಾಯಕಿ’ ಶೀರ್ಷಿಕೆಯಲ್ಲೇ ಮತ್ತೊಂದು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ವರ್ಷಕ್ಕೆ ಮುಂಚೆ ‘ಅಟೆಂಪ್ಟ್ ಟು ಮರ್ಡರ್’ ಸಿನಿಮಾವನ್ನು ನಿರ್ಮಿಸಿದ್ದ ಎಸ್.ವಿ ನಾರಾಯಣ್ ನಿರ್ಮಾಣದಲ್ಲಿ, ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ರಂಗನಾಯಕಿ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರಂಗನಾಯಕಿಯ ಟ್ರೇಲರ್ ಬಿಡುಗಡೆಗೊಂಡು ಸಂಚಲನ ಸೃಷ್ಟಿಸಿತ್ತು. ಈಗ ಈ ಚಿತ್ರದ ಮೊದಲ ಹಾಡು ಬಿಡುಗಡೆಗೊಂಡಿದೆ. ಕದ್ರಿ ಮಣಿಕಾಂತ್ ಸಂಗೀತ ನೀಡಿರುವ ‘ಕೃಷ್ಣ ನೀ ಬೇಗನೆ ಬಾರೋ’ ಹಾಡಿನ ಲಿರಿಕಲ್ ವಿಡಿಯೋ ಅನಾವರಣಗೊಂಡಿದೆ. ವ್ಯಾಸತೀರ್ಥರು ಬರೆದಿದ್ದ ಈ ಹಾಡನ್ನು ಅನನ್ಯ ಭಗತ್ ಮೋಹಕವಾಗಿ ಹಾಡಿದ್ದಾರೆ.
ಕಣಗಾಲ್ ಪುಟ್ಟಣ್ಣನವರ ‘ರಂಗನಾಯಕಿ’ಯಂತೆಯೇ ದಯಾಳ್ ಅವರ ‘ರಂಗನಾಯಕಿ’ ಕೂಡ ಮಹಿಳೆಯೊಬ್ಬಳ ಕುರಿತಾದ ಕಥಾಹಂದರ ಹೊಂದಿದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳೊಬ್ಬಳು ಈ ಸಮಾಜದಲ್ಲಿ ಹೇಗೆ ತಲೆಯೆತ್ತಿನಿಲ್ಲುತ್ತಾಳೆ, ತನಗಾದ ದೌರ್ಜನ್ಯದ ವಿರುದ್ಧ ಹೇಗೆ ದನಿಯೆತ್ತುತ್ತಾಳೆ ಎಂಬುದು ಚಿತ್ರದ ತಿರುಳು. ಈಗ ಬಿಡುಗಡೆಯಾಗಿರುವ ಕೃಷ್ಣ ನೀ ಬೇಗನೆ ಬಾರೋ ಹಾಡು ಪ್ರೇಮಗೀತೆಯಂತೆ ಮೂಡಿಬಂದಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಎಲ್ಲೆಡೆ ತಲುಪಿರುವ ಈ ಲಿರಿಕಲ್ ವಿಡಿಯೋ ಕೇಳಲು ಮಾತ್ರವಲ್ಲ ನೋಡಲು ಸಹಾ ಅಷ್ಟೇ ಮುದ್ದಾಗಿದೆ. ಇದನ್ನು ಓದಿ: ಟ್ರೇಲರ್ನಲ್ಲಿ ಕಂಡಿದ್ದು ಭಿನ್ನ ಕಥೆಯ ರಂಗನಾಯಕಿ!
ಶ್ರೀಮತಿ ಮಂಜುಳಾ ಮತ್ತು ಎಸ್.ವಿ. ಕೃಷ್ಣಮೂರ್ತಿ ಅರ್ಪಿಸಿರುವ ಎಸ್.ವಿ. ಎಸ್ವೀ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಬಿ. ರಾಕೇಶ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ, ನವೀನ್ ಕೃಷ್ಣ ಸಂಭಾಷಣೆ, ವೆಂಕಟ್ ದೇವ್ ಸಹನಿರ್ದೇಶನವಿದೆ. ಶ್ರೀನಿ, ಅದಿತಿ ಪ್ರಭುದೇವ ಮತ್ತು ತ್ರಿವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಓದಿ: ‘ರಂಗನಾಯಕಿ’ ಶುರುವಾಯ್ತು!