ರಾಂಚಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಹಾಕ್ತಿವಿ ಎಂದು ಸುಳ್ಳು ಭರವಸೆ ಕೊಟ್ಟಿದ್ದಾರೆಂದು ಆರೋಪಿಸಿ ರಾಂಚಿ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ರಾಂಚಿ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ 2ರಂದು ನಿಗದಿಗೊಳಿಸಿದೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿತ್ತು. ಆದರೆ ಈ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಅಮಿತ್ ಶಾ ಮತ್ತು ಮೋದಿ ವಿರುದ್ಧ ಐಪಿಸಿ ಸೆಕ್ಷನ್ 315ರ ಅಡಿಯಲ್ಲಿ ವಂಚನೆ ಹಾಗೂ ಜನಪ್ರತಿನಿಧಿ ಕಾಯ್ದೆ ಉಲ್ಲಂಘನೆ ಕಾಯ್ದೆ ಅಡಿ ರಾಂಚಿಯ ವಕೀಲ ಹರೇಂದ್ರ ಕುಮಾರ್ ಸಿಂಗ್ ಪ್ರಕರಣ ದಾಖಲಿಸಿದ್ದರು.
ಚುನಾವಣೆ ವೇಳೆ ಭರವಸೆ ಕೊಟ್ಟಂತೆ ಸಿಎಎ ಅನ್ನು ಜಾರಿಗೆ ತಂದ ಸರ್ಕಾರ, 15 ಲಕ್ಷ ನೀಡುವ ಭರವಸೆಯನ್ನು ಯಾಕೆ ಪೂರ್ಣಗೊಳಿಸಿಲ್ಲ? ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗೆ ಗೌರವವಿಲ್ವಾ? ಸುಳ್ಳು ಭರವಸೆ ನೀಡಿ ಮೋದಿ, ಶಾ ಜನರಿಗೆ ಮೋಸ ಮಾಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ಶನಿವಾರದಂದು ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, 2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯ ಮೇಲೆ ಈ ಆರೋಪ ಬಂದಿತ್ತು. ಆಗ ಯಾಕೆ ಈ ಬಗ್ಗೆ ದೂರು ನೀಡಿಲ್ಲ ಎಂದು ಸಿಂಗ್ ಅವರನ್ನು ಪ್ರಶ್ನಿಸಿತ್ತು.
2019ರ ಚುನಾವಣೆಯಲ್ಲಿ ಬಿಜೆಪಿ ಜನರ ಖಾತೆಗೆ 15 ಲಕ್ಷ ರೂ. ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರಲಿಲ್ಲ.