ರಾಮನಗರ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಬಿಗಿ ಬಂದೋಬಸ್ತ್ ಜೊತೆಗೆ ತಪಾಸಣೆಯನ್ನು ನಡೆಸಲಾಗುತ್ತಿದೆ. ಆದರೆ ಸಿಎಂ ತವರು ಕ್ಷೇತ್ರದಲ್ಲಿ ಮಾತ್ರ ಪೊಲೀಸರು ಇನ್ನೂ ಚುನಾವಣೆಯ ಗುಂಗಿನಿಂದ ಹೊರಬಂದಿಲ್ಲ.
ಸರಣಿ ಬಾಂಬ್ ಸ್ಫೋಟ ನಡೆದು ಮೂರು ದಿನಗಳೇ ಕಳೆದರೂ ಇನ್ನೂ ಕೂಡ ಆಯಾಕಟ್ಟಿನ ಜಾಗಗಳಲ್ಲಿ ತಪಾಸಣೆಯಿರಲಿ, ಪೇದೆಗಳಿಂದ ಬೀಟ್ ಕೂಡ ಮಾಡಿಸಲು ಸಾಧ್ಯವಾಗಿಲ್ಲ.
ಈ ಹಿಂದೆ ಭೌದ್ದ ಧರ್ಮಗುರು ದಲೈಲಾಮರ ಹತ್ಯೆಗೆ ಸಂಚು ರೂಪಿಸಿದ್ದ ಮೋಸ್ಟ್ ವಾಂಟೆಡ್ ಉಗ್ರ ಮುನಿರಲ್ ಶೇಖ್ ಹಾಗೂ ಆತನ ಸಹಚರರು ರಾಮನಗರದಲ್ಲಿ ಸೆರೆ ಸಿಕ್ಕಿದ್ದರು. ಅಲ್ಲದೇ ಬೆಂಗಳೂರು ನಗರ ಹಾಗೂ ಚನ್ನಪಟ್ಟಣದಲ್ಲಿ ಕೇರಳ ಮೂಲದ 10 ಮಂದಿ ಆರೋಪಿಗಳು ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ್ದರು. ಇಷ್ಟೆಲ್ಲ ನಡೆದರೂ ಕೂಡ ಪೊಲೀಸರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ರಾಮನಗರದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಾಗೂ ಗುಪ್ತಚರ ದಳದ ಅಧಿಕಾರಿಗಳ ತಂಡ ಆಗಾಗ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿರುವ ವಿಚಾರ ಗೊತ್ತಿದ್ದರೂ ಪೊಲೀಸರು ಮಾತ್ರ ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಆತಂಕ ಹಾಗೂ ಆಕ್ರೋಶಕ್ಕೂ ಕಾರಣವಾಗಿದೆ.