ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಫ್ಯಾಕ್ಸ್ ಮೂಲಕ ಪತ್ರ ಕಳುಹಿಸಿದ್ದಾರೆ ಎಂಬ ವಿಚಾರಕ್ಕೆ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಅವರು ಗರಂ ಆಗಿದ್ದಾರೆ. ಶಾಸಕರು ಮಾಧ್ಯಮಗಳ ಮುಂದೆ ಮಾತನಾಡುವ ಮುನ್ನ ಬಳಸುವ ಭಾಷೆ ಬಗ್ಗೆ ಅರಿವಿರಬೇಕು ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್ ಅವರು, ಸ್ಪೀಕರ್ ಸ್ಥಾನ ಬಹಳ ದೊಡ್ಡದು. ನಾನು ಇಲ್ಲಿ ತುಂಬ ಚಿಕ್ಕವನು. ನಾನು ಕುಳಿತಾಗ ಸ್ಪೀಕರ್ ಸ್ಥಾನಕ್ಕೆ ಅಪಮಾನ ಆಗಬಾರದು. ಸಂವಿಧಾನದ ನಿಯಮಗಳಿಗೆ ಅನುಗುಣವಾಗಿ ನಾನು ನಡೆದುಕೊಳ್ಳುತ್ತೇನೆ, ನನ್ನ ಮನಸ್ಸಿಗೆ ಸರಿ ಎನ್ನಿಸಿದರೆ ಮಾತ್ರ ಮಾಡುತ್ತೇನೆ. ಯಾವುದೇ ಶಾಸಕರು ಮಾಧ್ಯಮಗಳ ಮುಂದೇ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಲು ನಾನು ಪೋಸ್ಟಲ್ ಇಲಾಖೆಯ ಅಧಿಕಾರಿ ಅಲ್ಲ ಎಂದರು.
ನನ್ನ ನಂಬರ್ ಕೊಡಿ: ಕೆಲ ಶಾಸಕರು ರಾಜೀನಾಮೆ ನೀಡಲು ನಿಮ್ಮ ಭೇಟಿಗೆ ಸಮಯ ಕೇಳಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೂ ನನ್ನ ಭೇಟಿಗೆ ಯಾವ ಶಾಸಕರು ಸಮಯ ಕೇಳಿಲ್ಲ. ಒಂದೊಮ್ಮೆ ಶಾಸಕರು ರಾಜೀನಾಮೆ ನೀಡುವ ವಿಚಾರ ನಿಮಗೆ ಗೊತ್ತಿದ್ದರೆ ಅವರಿಗೆ ನನ್ನ ನಂಬರ್ ಕೊಡಿ ಎಂದರು.
ಇಲ್ಲಿ ಯಾರ ದೊಡ್ಡಸ್ಥಿಕೆ ಇಲ್ಲಿ ನಡೆಯವುದಿಲ್ಲ, ಸಂವಿಧಾನದ ನಿಯಮಗಳು ಮಾತ್ರ ಇಲ್ಲಿ ದೊಡ್ಡದು. ನಾನು ತಲೆ ಬಾಗೋದು ಸಂವಿಧಾನದ ಆಶಯದಲ್ಲಿ ಮಾತ್ರ. ಅಸೆಂಬ್ಲಿ ವಿಚಾರದಲ್ಲಿ ನಾವು ದನಗಳ ರೀತಿ ನಡೆದುಕೊಳ್ಳಲು ಆಗಲ್ಲ. ನಮ್ಮ ಸಂಸ್ಕøತಿಯಲ್ಲಿ ತಂದೆಯೊಂದಿಗೆ ಮಗ ಮಾತನಾಡಲು, ಗಂಡ ಹೆಂಡತಿಯೊಂದಿಗೆ ಮಾತನಾಡಲು ಒಂದು ಸಂಸ್ಕಾರ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಆನಂದ್ ಸಿಂಗ್ ಅವರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರನ್ನು ಕರೆದು ಮತ್ತೊಮ್ಮೆ ಮಾತನಾಡುತ್ತೇನೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅವರಿಗೆ ಬೇಕಾದ ಕೆಲ ಸೂಚನೆಗಳನ್ನು ನೀಡುತ್ತೇನೆ. ಆನಂದ್ ಸಿಂಗ್ ರಾಜೀನಾಮೆ ಮಾತ್ರ ನನಗೆ ತಲುಪಿದೆ. ನಿನ್ನೆ ನನ್ನ ದೊಮ್ಮಲೂರು ಮನೆಗೆ ಬಂದು ರಾಜೀನಾಮೆ ಕೊಟ್ಟಿದ್ದಾರೆ. ನಿಯಮ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದೇನೆ. ಇಷ್ಟೇ ದಿನದಲ್ಲಿ ರಾಜೀನಾಮೆ ಬಗ್ಗೆ ತೀರ್ಮಾನ ಮಾಡಬೇಕು ಎಂಬ ನಿಯಮ ಇಲ್ಲ. ಆದರೆ ಸಂವಿಧಾನದ ಅಡಿಯಲ್ಲಿ ಕಾನೂನು ಬದ್ಧವಾಗಿ ಅತಿ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇನೆ. ಜಾಧವ್ರಂತೆಯೇ ಪಬ್ಲಿಕ್ ರಿಯಾರಿಂಗ್ ಮಾಡುವ ಯೋಚನೆಯೂ ಇದೆ ಎಂದು ಸ್ಪಷ್ಟಪಡಿಸಿದರು.