– ಸಿದ್ದರಾಮಯ್ಯ ಸಿಎಂ ಚಾಪ್ಟರ್ ಕ್ಲೋಸ್
ಬೆಳಗಾವಿ: ಮೇ 29 ರಿಂದ ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭ ಆಗಲಿದ್ದು, ಆದರೆ ಈ ಬಾರಿ ಮಾನಸಿಕವಾಗಿ ಆಪರೇಷನ್ ಕಮಲ ಎದುರಿಸಲು ಸಿದ್ಧರಿದ್ದೇವೆ. ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ‘ರಿಲೀಸ್ ಆಗದ ಸಿನಿಮಾದಂತೆ’ ಎಂದು ಅರಣ್ಯ ಸಚಿವ ಸತೀಸ್ ಜಾರಕಿಹೊಳಿ ಸೋದರನಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಮಾಡಿದರೆ ನಾವು ಉಲ್ಟಾ ಆಪರೇಷನ್ ಮಾಡುತ್ತೇವೆ. ಆಪರೇಷನ್ ಕಮಲ ಗೋವಾಕ್ಕೆ ಶಿಫ್ಟ್ ಆದ್ರು ಆಗಬಹುದು. ನಮ್ಮ ಶಾಸಕರು ಯಾರು ಅವರ ಜತೆಗೆ ಹೋಗುವುದಿಲ್ಲ. ಆದರೆ ಮೋದಿ ಹೊಡೆತಕ್ಕೆ ಸಿದ್ದರಾಮಯ್ಯ ಸಿಎಂ ಮಾಡುವುದು ಕ್ಲೋಸ್ ಆಗಿದೆ. ಹೈಕಮಾಂಡ್ ಹೇಳಿದಂತೆ ನಾಲ್ಕು ವರ್ಷ ಲೆಫ್ಟ್ ರೈಟ್ ಮಾಡುವುದಷ್ಟೇ ನಮ್ಮ ಕೆಲಸ ಎಂದು ಸಿದ್ದು ಸಿಎಂ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ‘ಕರಿಮಾಯೆ’ ಎಂಬ ಪಿಕ್ಚರ್ ಇದ್ದಂಗೆ. ಆ ಸಿನಿಮಾ ಬಿಡುಗಡೆ ಆಗಲಿಲ್ಲ ಅದೇ ರೀತಿ ಈಗ ರಮೇಶ್ ರಾಜೀನಾಮೆ ಬಿಡುಗಡೆಯಾಗದ ಸಿನಿಮಾ ಇದ್ದಂತೆ. ಅವರ ಮೇಲೆ ಸ್ಪೀಕರ್ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ಗೆ ಈ ಸ್ಥಿತಿ ಬರಲು ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೆ ಕಾರಣ ಇರಬಹುದು. ಸರಿ ಮಾಡಿಕೊಳ್ಳಲು ನಮಗೆ ಇನ್ನೂ ನಾಲ್ಕು ವರ್ಷ ಸಮಯ ಇದೆ. ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಪಕ್ಷದ ಮೇಲೆ ಉಂಟಾಗಿದ್ದು, ಜೆಡಿಎಸ್ ಪಕ್ಷವನ್ನು ಒಪ್ಪಿಕೊಳ್ಳದವರು, ಕಾಂಗ್ರೆಸ್ ಪಕ್ಷವನ್ನು ದ್ವೇಷ ಮಾಡುವ ಸ್ಥಿತಿ ನಿರ್ಮಾಣ ಆಗಿದೆ. ಆದರೆ ಸದ್ಯ ಜೆಡಿಎಸ್ ನಾಯಕರು ಕೂಡ ನಮ್ಮದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಆಪರೇಷನ್ ಕಮಲಕ್ಕೆ ಅವಕಾಶ ಮಾಡಿಕೊಡದಂತೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುತ್ತಾರೆ. ಸೋನಿಯಾ ಗಾಂಧಿ ಆ ಸ್ಥಾನಕ್ಕೆ ಬರುವುದಿಲ್ಲ. ರಾಜ್ಯ ಅಧ್ಯಕ್ಷ ಸ್ಥಾನದಲ್ಲೂ ಬದಲಾವಣೆ ಆಗಲ್ಲ, ದಿನೇಶ್ ಗುಂಡೂರಾವ್ ಅವರು ಮುಂದುವರಿಯುತ್ತಾರೆ. ಉಳಿದಂತೆ ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವುದು ಅವರಿಗೆ ಬಿಟ್ಟ ವಿಚಾರ. ಆದರೆ ನಾಲ್ಕು ವರ್ಷ ದಲಿತ ಸಿಎಂ ಪ್ರಶ್ನೆ ಇಲ್ಲ ಕುಮಾರಸ್ವಾಮಿ ಮುಂದುವರಿಯುತ್ತಾರೆ ಸ್ಪಷ್ಟಪಡಿಸಿದರು.