ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದ ಆಪರೇಷನ್ ಕಮಲಕ್ಕೆ ಕೈ ಹಾಕಿದ ಕೈ ಪಕ್ಷದ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಲೋಕಸಮರ ಫಲಿತಾಂಶದ ಬೆನ್ನಲ್ಲೇ ತಡರಾತ್ರಿ ಕಡಲ ನಗರಿ ಗೋವಾಗೆ ತೆರಳಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ಶನಿವಾರ ಮಧ್ಯಾಹ್ನ ಮಗ ಅಮರನಾಥ ಜೊತೆ ಬೆಂಗಳೂರಿನಿಂದ ದೆಹಲಿಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಗೋವಾಗೆ ತೆರಳಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಸುಮಾರು 9 ಶಾಸಕರು ಗೋವಾ ಖಾಸಗಿ ಹೊಟೇಲ್ಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೇ 29ರ ವರಗೆ ರೆಸಾರ್ಟಿನಲ್ಲಿದ್ದು ದೆಹಲಿಯಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ 3 ರಂದು ಸರ್ಕಾರ ಬೀಳಿಸಲು ಮೂಹೂರ್ತ ಪಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.
ಸದ್ಯದ ಮಾಹಿತಿ ಪ್ರಕಾರ 15 ದಿನಗಳವರೆಗೆ ರೆಸಾರ್ಟ್ ರಾಜಕೀಯ ನಡೆಯಲಿದೆ ಎಂದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ರಮೇಶ್ ಆ್ಯಂಡ್ ಟೀಂ ಸಭೆ ನಡೆಸಿ ಗೋವಾಗೆ ಹೋಗುವ ತೀರ್ಮಾನಕ್ಕೆ ಬಂದಿದ್ದರು. ಗೋವಾದ ಪೋರ್ಟ್ ಅಗೋಡಾದಲ್ಲಿರುವ ಐಷಾರಾಮಿ ಪೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದೇ ಹೋಟೆಲ್ನಲ್ಲಿ ಸುಮಾರು 30 ರೂಮ್ ಬುಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.