ಚಿಕ್ಕಮಗಳೂರು: ಗ್ಯಾರಂಟಿಗೆ (Guarantee Scheme) ಮುಕ್ಕಾಲು ಭಾಗ ಹಣ ಖರ್ಚು ಮಾಡಿದ್ರೆ ಆಡಳಿತ ನಡೆಸುವುದು ಕಷ್ಟ ಎಂದು ರಂಭಾಪುರಿ ಶ್ರೀಗಳು (Rambhapuri Shri) ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ರಾಜ್ಯ ಸರ್ಕಾರ ಹಿಂದಿನ ಸರ್ಕಾರದ ಹಲವು ಯೋಜನೆಗಳನ್ನು ತಡೆಹಿಡಿದಿದೆ. ಬಜೆಟ್ನಲ್ಲೂ ಮಠ ಮಂದಿರಗಳಿಗೆ ವಿಶೇಷವಾದ ಅನುದಾನ ಕೊಟ್ಟಿಲ್ಲ. ಆಡಳಿತ ಪಕ್ಷದ ಶಾಸಕರು ಕೂಡ ಅಭಿವೃದ್ಧಿಗೆ ಹಣ ಇಲ್ಲದೆ ಕೊರಗುತ್ತಿದ್ದಾರೆ. ಜನರ ಬಳಿ ಹೋಗುವುದು ಕಷ್ಟವಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ ಎಂದಿದ್ದಾರೆ.
ಸೋಮವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಅನುದಾನದ ಬಗ್ಗೆ ಚರ್ಚೆ ಆಗಿರಬಹುದು. ಜಾಸ್ತಿ ಅಲ್ಲದಿದ್ದರೂ. ಆಯಾ ಕ್ಷೇತ್ರದ ಶಾಸಕರಿಗೆ ವಿಶೇಷ ಅನುದಾನ ಕೊಡಬಹುದು ಎನ್ನುವ ನಂಬಿಕೆ ಇದೆ ಎಂದಿದ್ದಾರೆ.
ರಾಜ್ಯದಲ್ಲಿ ವೀರಶೈವ – ಲಿಂಗಾಯುತರ ಸಭೆ ವಿಜಯೇಂದ್ರ ಅಭಿಮಾನಿಗಳು ಮಾಡುತ್ತಿರಬಹುದು. ವಿಜಯೇಂದ್ರ ಅವರೇ ಮಾಡಿಸುತ್ತಿದ್ದಾರೆ ಎನ್ನುವ ಭಾವನೆ ಇಲ್ಲ. ಅಭಿಮಾನಿಗಳು ಅಭಿಮಾನದಿಂದ ಮಾಡಿರಬಹುದು. ಒಳ್ಳೆಯ ನಾಯಕತ್ವ, ರಾಜ್ಯದ ಹಿತ ಚಿಂತನೆ ಕಾಪಾಡಲು ಜನರ ಸಹಕಾರ ಅವಶ್ಯಕ. ವಿಜಯೇಂದ್ರ ವಿಚಾರದಲ್ಲೂ ಒಳ್ಳೆಯದು ಮಾಡಿದಾಗ ಹೆಮ್ಮೆಯಿಂದ ಹೇಳುತ್ತೇವೆ. ಅಲ್ಲದ ಮಾರ್ಗ ತುಳಿದಾಗ ತಿದ್ದಿಕೊಳ್ಳಲು ಸೂಚನೆ ನೀಡುವುದಕ್ಕೂ ಹಿಂದೇಟು ಹಾಕಲ್ಲ ಎಂದಿದ್ದಾರೆ.
ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನದ ಅಪಸ್ವರಕ್ಕೆ ರಾಷ್ಟ್ರ-ರಾಜ್ಯ ನಾಯಕರು ಕೂತು ಮಾತಾಡೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.