ಗದಗ: ನಗರದ ಹಿರಿಯ ಸಾಹಿತಿ, ಆಶುಕವಿ, ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ, ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅನಕ್ಷರಸ್ಥ ಕವಿ ರಾಮಣ್ಣ ಬ್ಯಾಟಿ(75) ಇಂದು ಸಂಜೆ ಸ್ವ-ಗೃಹದಲ್ಲಿ ನಿಧನರಾಗಿದ್ದಾರೆ.
ಕನ್ನಡದ ಭಾಮಿನಿ ಷಟ್ಪದಿಯಲ್ಲಿ ವಿಶ್ವರತ್ನ, ಮಹಾನಾಯಕ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುರಾಣವನ್ನು ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಬೆಳೆದ ಪುರಾಣಕವಿ ರಾಮಣ್ಣ ಬ್ಯಾಟಿ. ಇದನ್ನೂ ಓದಿ: ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರಿ ನೌಕರರು ಸೇವೆ ಸಲ್ಲಿಸಬೇಕು: ಸರಸ್ವತಿ.ಕೆ.ಎನ್
ರಾಮಣ್ಣ ಅವರದ್ದು ಕಡತನದ ಬದುಕು ಆದರೆ ಅವರ ಕಾವ್ಯ ಜೀವನ ಅತ್ಯಂತ ಶ್ರೀಮಂತವಾಗಿದೆ. ರಾಮಣ್ಣ ಅವರು ನೇಕಾರ ಕುಟುಂಬದಲ್ಲಿ ಜನಿಸಿದ್ದು, ಕುಲಕಸಬು ನೇಕಾರಿಕೆಯಾದರು ಕಾವ್ಯ ರಚನೆಯೇ ಉಸಿರಾಗಿಸಿಕೊಂಡ ಕಾಯಕ ಜೀವಿ. ಇದುವರೆಗೆ ಅನೇಕ ಪುಣ್ಯ ಪುರುಷರ, ಮಹಾತ್ಮರ ಕುರಿತು ಕೃತಿಗಳನ್ನು ರಚಿಸಿ ‘ಭಕ್ತ ಕವಿರಾಮ’ ಎಂದೆ ಖ್ಯಾತಿ ಪಡೆದಿದ್ದಾರೆ. ಆಧುನಿಕ ಪುರಾಣಕಾರರೆಂದು ಇವರು ಹೆಸರು ವಾಸಿಯಾಗಿದ್ದರು.
ಬಸವಣ್ಣ, ಅಂಬೇಡ್ಕರ್, ಪುಲೆ ಪುರಾಣ, ಬಂಜಾರ ಜನರ ಆರಾಧ್ಯದೈವ ಸಂತ ಶ್ರೀ ಸೇವಾಲಾಲ ಪುರಾಣಗಳು ತುಂಬಾ ಜನಪ್ರಿಯವಾಗಿವೆ. ರಾಮಣ್ಣ ಅವರು ದೈವದತ್ತ ಪ್ರತಿಭೆಯನ್ನು ಪಡೆದಿರುವ ಆಶುಕವಿ. ಕಪ್ಪತ್ತಗುಡ್ಡದ ಜಲದ ಶಂಕರನ ಕೃಪೆಯಿಂದ ಕವಿತ್ವ ಪಡೆದ ವರಕವಿ. ಅವರು ಮೊದಮೊದಲು ಭಜನಾ ಪದಗಳು, ಭಕ್ತಿಗೀತೆಗಳ ರಚನೆಯಲ್ಲಿ ತೊಡಗಿಕೊಂಡರು. ನಂತರ, ಜಗದ್ಗುರು ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಪ್ರೋತ್ಸಾಹ, ಪೋಷಣೆ ಮತ್ತು ಅವರ ಪ್ರೇರಣೆಯಿಂದ ಪುರಾಣಗಳನ್ನು ಬರೆಯಲು ಮುಂದಾದರು. ಸುಮಾರು 25ಕ್ಕೂ ಅಧಿಕ ಪುರಾಣಗಳನ್ನು ಬರೆದು ಪುಣ್ಯಪುರುಷರ ಕೃಪೆಗೆ ಪಾತ್ರರಾಗಿದ್ದಾರೆ.
ರಾಮಣ್ಣ ಅವರು ಅನಕ್ಷರಸ್ಥರು ಅವರಿಂದ ರಚನೆಯಾಗಿರುವ ಪುರಾಣಗಳು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ಹೀಗೆ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಮತ್ತೆ ಇಂತಹ ಮಹಾಪುರುಷರು ಹುಟ್ಟಿ ಬರಲಿ ಎಂಬುದು ಅಭಿಮಾನಿಗಳ ಆಶಯ. ಇದನ್ನೂ ಓದಿ: ಪುನೀತ್ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಅಭಿಮಾನಿ ಸಾವು
ರಾಮಣ್ಣ ಅವರ ಸಾಧನೆ ಕಂಡು ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿದ್ದರು. ಪಬ್ಲಿಕ್ ಟಿವಿ ವರದಿ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. 2020ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಹೀಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇಂದು ಬೆಟಗೇರಿ ಮುಕ್ತಿ ಮಂದಿರದಲ್ಲಿ ಅಂತ್ಯಕ್ರಿಯೆ ನೆರವೇರಿತು.