ರಾಮನಗರ: ವಸತಿ ಶಾಲೆಗೆ ಸೇರಿಸಿದ ಪ್ರಾಥಮಿಕ ಸಚಿವ ಸುರೇಶ್ ಕುಮಾರ್ ಅವರಿಗೆ ಹೂವು ಮಾರುತ್ತಿದ್ದ ಬಾಲಕಿ ಧನ್ಯವಾದ ತಿಳಿಸಿದ್ದಾಳೆ. ಶಾಲೆ ಮುಗಿದ ಬಳಿಕ ತಾಯಿ ಕಟ್ಟಿಕೊಡುತ್ತಿದ್ದ ಹೂವು ಮಾರುತ್ತಿದ್ದ ಬಾಲಕಿಯನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ವಸತಿ ಶಾಲೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಮಂಡ್ಯ ಜಿಲ್ಲೆಯ ಹೊಳಲು ಗ್ರಾಮದ ನಿವಾಸಿ ಶ್ರೀನಿವಾಸ್ ನಾಯ್ಕ್ ಹಾಗೂ ಲಕ್ಷ್ಮಿಬಾಯಿ ದಂಪತಿಯ ಪುತ್ರಿ ಸಂಗೀತಾ ಕೆಲಸವನ್ನು ಬಿಡಿಸಿ ಶಾಲೆಗೆ ಸೇರಿದ ಬಾಲಕಿ. ಇತ್ತೀಚೆಗೆ ಬೆಂಗಳೂರಿನ ಕೆಂಗೇರಿ ಬಳಿ ಹೂವು ಮಾರಾಟ ಮಾಡುತ್ತಿದ್ದ ಬಾಲಕಿ ಸಂಗೀತಾಳನ್ನು ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ರವರು ನೋಡಿದ್ದರು. ಅಲ್ಲದೇ ಬಾಲಕಿ ಬಗ್ಗೆ ಸಚಿವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗಳ ನಿರ್ದೆಶನದಂತೆ ಸಂಬಂಧಿಸಿದ ಅಧಿಕಾರಿಗಳು ಬಾಲಕಿಯ ಪೂರ್ವಾಪರವನ್ನು ಸಂಗ್ರಹಿಸಿ ಮಾಹಿತಿ ನೀಡಿದ್ದರು. ಬಳಿಕ ಬಾಲಕಿ ಹಾಗೂ ಆಕೆಯ ತಾಯಿಯನ್ನ ವಿಚಾರಣೆ ನಡೆಸಿ ಬಾಲಕಿಯ ಇಚ್ಛೆ ಮೇರೆಗೆ ರಾಮನಗರದ ಕೈಲಾಂಚದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ 7ನೇ ತರಗತಿಗೆ ಸೇರಿಸಿದ್ದಾರೆ.
ಸಂಗೀತಾಳ ತಂದೆ ಶ್ರೀನಿವಾಸ್ ನಾಯ್ಕ್ ಮನೆಯ ಜವಾಬ್ದಾರಿಯನ್ನ ತೆಗೆದುಕೊಳ್ಳದೇ ಪತ್ನಿ, ಮಗಳನ್ನು ತೊರೆದಿದ್ದಾನೆ. ಮಗಳ ಹೊಣೆ ಹೊತ್ತಿರುವ ಲಕ್ಷ್ಮಿಬಾಯಿ ಅವರು ಕೆಂಗೇರಿಯಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಅಲ್ಲಿಯೇ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಸ್ವಗ್ರಾಮ ಹೊಳಲಿನಲ್ಲಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವ ಲಕ್ಷ್ಮಿಬಾಯಿ ದಿನನಿತ್ಯ ಕೆಂಗೇರಿಯಿಂದ ಹೊಳಲು ರೈಲಿನಲ್ಲಿ ಗ್ರಾಮಕ್ಕೆ ಓಡಾಡುತ್ತಿದ್ದಾರೆ. ಇದರ ನಡುವೆ ಹೂವು ಕಟ್ಟಿಕೊಟ್ಟು ತನ್ನ ಮಗಳಿಗೆ ಅಕ್ಕಪಕ್ಕದ ಮನೆಗಳಿಗೆ ಕೊಡುವುದು, ಅಲ್ಲದೇ ಮಾರಾಟ ಮಾಡುವುದಕ್ಕೆ ತಿಳಿಸಿದ್ದರು. ತನ್ನ ತಾಯಿಗೆ ನೆರವಾಗಲು ಸಂಗೀತಾ ಹೂವು ಮಾರಾಟ ಮಾಡುವ ಕೆಲಸವನ್ನ ಮಾಡುತ್ತಿದ್ದಳು. ಇದೀಗ ವಸತಿ ಶಾಲೆಗೆ ಸೇರಿರುವ ಸಂಗೀತಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾಳೆ. ಇದನ್ನೂ ಓದಿ: ಗಾಡಿಗೆ ಬೀಗ ಹಾಕಿದ್ದಾರೆ: ಸಚಿವರ ಮುಂದೆ ಬೀಗಿದ ಪುಟಾಣಿಗಳು
ಓದುವ ವಯಸ್ಸಿನಲ್ಲಿ ಮಕ್ಕಳು ದುಡಿಯುವ ಕೆಲಸಕ್ಕೆ ಹೋಗುತ್ತಿರುವುದು ದುರದೃಷ್ಟಕರವಾಗಿದೆ. ಬಾಲ್ಯದಲ್ಲೇ ತಮ್ಮ ಜೀವನವನ್ನ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿದ್ಯಾಭ್ಯಾಸಕ್ಕೂ ಎಳ್ಳುನೀರು ಬಿಡುವಂತಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವಾರು ಮಕ್ಕಳು ಪೆನ್, ಮೊಬೈಲ್ ವಸ್ತುಗಳು, ಹೂವು, ಸಣ್ಣಪುಟ್ಟ ವಸ್ತುಗಳನ್ನ ಹೆದ್ದಾರಿ ಸಿಗ್ನಲ್ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮಾರಾಟ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಅಂತಹ ಮಕ್ಕಳನ್ನು ವಿದ್ಯಾಭ್ಯಾಸದ ಕಡೆಗೆ ಮುಖ ಮಾಡಬೇಕಿದೆ.
ಸಂಗೀತ ಎಂಬ ಈ ಬಾಲಕಿ ಕೆಂಗೇರಿ ರೈಲ್ವೇ ನಿಲ್ದಾಣದ ಬಳಿ ಹೂವು ಮಾರುತ್ತಿದ್ದಳು.
ನಮ್ಮ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಆಕೆಯ ಪೋಷಕರ ಮನ ಒಪ್ಪಿಸಿ ಸಂಗೀತ ಳನ್ನು ರಾಮನಗರದ ಮೊರಾರ್ಜೀ ದೇಸಾಯಿ ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಸಜ್ಜಾಗಿದ್ದಾರೆ.
ಇಂತಹ ಇನ್ನೂ ಅನೇಕ ಬಾಲ ಕಾರ್ಮಿಕರಿಗೆ ಶಿಕ್ಷಣ ಕೊಡಿಸುವ ಯೋಜನೆ ನಮ್ಮ ಇಲಾಖೆಯದ್ದು. pic.twitter.com/cTwY82KN9o
— S.Suresh Kumar (@nimmasuresh) December 18, 2019