ಡಿಕೆ ಶಿವಕುಮಾರ ಅಲ್ಲ ಏಸುಕುಮಾರ – ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ

1 Min Read

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಬಳಿಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ.

ಶಿಲಾನ್ಯಾಸ ನೆರವೇರಿದ ದಿನದಿಂದ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡರು ಟ್ವಿಟ್ಟರ್ ನಲ್ಲಿ ಕಿಡಿಕಾರಿದರೆ, ಅಲ್ಲಲ್ಲಿ ಡಿಕೆಶಿ ವಿರುದ್ಧ ಟ್ರೋಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹ ಕಾಣಿಸಿಕೊಂಡಿದ್ದವು. ಆದರೆ ಇದೀಗ ಡಿಕೆಶಿ ವಿರುದ್ಧ ನೆಟ್ಟಿಗರು ನಾನಾ ರೀತಿಯಲ್ಲಿ ಡಿಕೆಶಿ ಫೋಟೋ ಎಡಿಟ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಏಸು ಪ್ರತಿಮೆಯ ವಿವಾದದ ಕಿಡಿ ಇದೀಗ ರಂಗೇರಿದ್ದು, ಡಿಕೆ.ಶಿವಕುಮಾರ ಅಲ್ಲ ಏಸುಕುಮಾರ ಎಂಬ ಬರಹಗಳ ಜೊತೆಗೆ ಕನಕಪುರ ಜನತೆಯನ್ನು ಕ್ರಿಶ್ಚಿಯನ್ ಆಗಿ ಮತಾಂತರ ಮಾಡುವ ಹುನ್ನಾರ ಆಗಿದ್ದು, ಕನಕಪುರ ಕ್ರಿಶ್ಚಿಯನ್ನರ ಕೋಟೆಯಾಗಲಿದೆ ಎಂಬ ಬರಹಗಳ ಜೊತೆಗೆ ಡಿ.ಕೆ ಶಿವಕುಮಾರ್ ಏಸು ಗೆಟಪ್ ನಲ್ಲಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಡಿಕೆ ಶಿವಕುಮಾರ್ ಪ್ರತಿಮೆಯ ಶಿಲಾನ್ಯಾಸ ನೆರವೇರಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಅಡಿ ಬರಹಗಳನ್ನು ಹಾಕುವ ಮೂಲಕ ನೆಟ್ಟಿಗರು ವ್ಯಾಪಕ ಟೀಕೆ ಮಾಡಿದ್ದಾರೆ. ಮತ್ತೊಂದು ಕಡೆ ಏಸು ಶಿಲುಬೆ ಹೊತ್ತ ರೀತಿಯಲ್ಲಿಯೇ ಶಿವಕುಮಾರ್ ಅವರನ್ನು ಶಿಲುಬೆಗೇರಿಸಿರುವ ನೆಟ್ಟಿಗರು, ತಂದೆಯೇ ನನ್ನನ್ನು ಕ್ಷಮಿಸು ನಾನು ಏನು ಕೆಲಸ ಮಾಡ್ತಿದ್ದೇನೆ ಎನ್ನುವುದು ತಿಳಿದಿಲ್ಲ ಎಂದು ಬರೆಯಲಾಗಿದೆ.

ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಕನಕಪುರವನ್ನು ಎಸಪ್ಪನಪುರ ಮಾಡಲು ಹೊರಟ ಕೆಂಪೇಗೌಡರ ಮಗ ಡಿ.ಕೆ ಶಿವಕುಮಾರ್, 10 ಎಕರೆ ಜಮೀನನ್ನು ಕ್ರೈಸ್ತ ಬಂಧುಗಳಿಗೆ ಹಸ್ತಾಂತರಿಸಿದ ಏಸಪ್ಪನ ಪರಮ ಭಕ್ತ. ಪೂಜನೀಯ ಆದಿಚುಂಚನಗಿರಿ ಸ್ವಾಮಿಜೀಯವರು ತಮ್ಮ ಭಕ್ತನನ್ನು ಕರೆದು ಬುದ್ಧಿ ಹೇಳಬೇಕು ಎಂದು ಸಮಸ್ತ ಹಿಂದು ಸಂಘಟನೆಗಳ ಆಗ್ರಹ ಎಂದು ಕಿಡಿಕಾರಿದ್ದಾರೆ.

ಅಲ್ಲದೇ ಕಾಲಭೈರವೇಶ್ವರ ಕಾಪಾಡು ನಿನ್ನ ಭಕ್ತನನ್ನು. ರಾಮನಗರದ ಸುತ್ತ ಮುತ್ತ ಜನರ ಮುಂದಿನ ಹೆಸರುಗಳು. ಜಾನಿ ಗೌಡ, ಪೀಟರ್ ಗೌಡ, ಮೇರಿ ಗೌಡ, ಹೆನ್ರಿ ಗೌಡ, ಜೆಸ್ಸಿ ಗೌಡ, ಒಬಾಮ ಗೌಡ, ಕಿಸ್ಟೋಫರ್ ಗೌಡ, ದೇಪಿದ್, ಏಸುಡಿಕೆ, ಏಸುಸ್ವಾಮಿ, ಏಸುನೀತ, ಏಸ್ನಿಖಿಲ್ ಇತ್ಯಾದಿ ಇತ್ಯದಿಯಾಗಿ ಕರೆಯಬೇಕಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *