ರಾಮನಗರ: ಗಾರ್ಮೆಂಟ್ಸ್ ನೌಕರರನ್ನು ಕರೆ ತರುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ಇಬ್ಬರಿಗೆ ಕಾಲು ಮುರಿದು, 20ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದ ಬಳಿ ನಡೆದಿದೆ.
ಕನಕಪುರ ಹೊರ ವಲಯದ ಶಿವನೇಗೌಡನದೊಡ್ಡಿ ಗ್ರಾಮದ ಬಳಿಯ ಲಗೂನಾ ಗಾರ್ಮೆಂಟ್ಸ್ ಗೆ ಇಂದು ಬೆಳಿಗ್ಗೆ ನೌಕರರನ್ನು ಮಿನಿ ಬಸ್ನಲ್ಲಿ ಕರೆತರಲಾಗುತ್ತಿತ್ತು. ಸುಮಾರು 30 ಜನರಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಉರುಳಿ ಬಿದ್ದಿದೆ.
ಚಾಲಕನ ಬದಲಿಗೆ ಗಾರ್ಮೆಂಟ್ಸ್ ನ ಟೈಲರ್ ಓರ್ವ ಮಿನಿಬಸ್ ಚಲಾಯಿಸಿದ್ದೆ ಈ ದುರ್ಘಟನೆಗೆ ಕಾರಣವಾಗಿದೆ. ಕಾಲು ಮುರಿತಕ್ಕೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗಳಗೆ ಒಳಗಾದವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕನಕಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.