ಅಯೋಧ್ಯೆ: ಉದ್ಘಾಟನೆಗೆ ಸಿದ್ಧವಾಗಿರುವ ಅಯೋಧ್ಯೆಯ ರಾಮಮಂದಿರ (Ram Mandir) ಹಾಗೂ ಸುತ್ತಮುತ್ತ ಕೆತ್ತಲಾದ ರಾಮಾಯಣದ ಕಥಾ ಹಂದರದ ಶಿಲ್ಪಗಳ ರಾತ್ರಿ ವೇಳೆ ಕ್ಲಿಕ್ಕಿಸಿದ ಫೋಟೋಗಳನ್ನು ಇದೇ ಮೊದಲ ಬಾರಿಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಂಚಿಕೊಂಡಿದೆ. ರಾಮಮಂದಿರದ ರಾತ್ರಿ ವೇಳೆ ತೆಗೆದ ಚಿತ್ರಗಳು ಶಿಲ್ಪಿಗಳ ನಾಜೂಕು ಕೆಲಸವನ್ನು ನಮ್ಮ ಮುಂದೆ ಮತ್ತಷ್ಟು ಶ್ರೀಮಂತವಾಗಿ ತೋರಿಸಿವೆ.
ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿರುವ ಜಟಾಯುವಿನ ಪ್ರತಿಮೆಯ ಚಿತ್ರ. ಜಟಾಯು ಸೀತಾ ಮಾತೆಯನ್ನು ರಾವಣ ಅಪಹರಿಸುವಾಗ ಆತನ ವಿರುದ್ಧ ಹೋರಾಡುತ್ತಾನೆ. ಇದರಲ್ಲಿ ಆತ ರೆಕ್ಕೆಗಳನ್ನು ಕಳೆದುಕೊಂಡು ಸೋಲುತ್ತಾನೆ. ಕೊನೆಗೆ ರಾಮನಿಗೆ ಅಪಹರಣದ ಸಂದೇಶ ತಿಳಿಸಿ ಸಾವನ್ನಪ್ಪುತ್ತಾನೆ. ರಾಮಾಯಣದಲ್ಲಿ ಮಹತ್ವದ ಪಾತ್ರವಹಿಸಿರುವ ಜಟಾಯುವಿನ ಮೂರ್ತಿ ರಾಮಮಂದಿರದ ಆವರಣದಲ್ಲಿ ವಿಶೇಷವಾಗಿ ಮೂಡಿ ಬಂದಿದೆ. ಇದನ್ನೂ ಓದಿ: ಏಳು ಸುತ್ತಿನ ಕೋಟೆಯಾದ ಅಯೋಧ್ಯೆ – 30,000 ಯೋಧರು, AI ಕಣ್ಗಾವಲು – ಭದ್ರತೆಗೆ ವಿಶೇಷ ತಂಡಗಳ ನಿಯೋಜನೆ
ರಾಮಮಂದಿರದ ಕಾರಿಡಾರ್ನ ರಾತ್ರಿ ಚಿತ್ರ ದೇವಾಲಯದ ಒಳಗೆ ಅದ್ಭುತವಾಗಿ ರಚಿಸಲಾದ ರಚನೆಗಳನ್ನು ಕೆತ್ತನೆಗಳನ್ನು ತೋರಿಸುತ್ತದೆ.
ದೇವಾಲಯದ ಚಾವಣಿಯ ಮೇಲೆ ಸಹ ಸುಂದರವಾದ ಕೆತ್ತನೆ ಮಾಡಲಾಗಿದ್ದು, ಶಿಲ್ಪಿಗಳ ಕರಕುಶಲತೆಯ ಚಮತ್ಕಾರವನ್ನು ಅನಾವರಣಗೊಳಿಸಿದೆ. ಈ ಗೋಡೆಗಳ ಮೇಲೆ ಸಿಸಿಟಿವಿ ಕ್ಯಾಮೆರಾಗಳನ್ನು ಭದ್ರತೆಯ ದೃಷ್ಟಿಯಿಂದ ಅಳವಡಿಸಲಾಗಿದೆ.
ಮತ್ತೊಂದು ಚಿತ್ರದಲ್ಲಿ ರಾಮಾಯಣದಲ್ಲಿ ಮಹತ್ವದ ಪಾತ್ರವಹಿಸಿದ್ದ ವಾನರ ಚಿತ್ರಗಳನ್ನು ಮಂಟಪದ ಮೇಲೆ ಕೆತ್ತಲಾಗಿದೆ. ಹೂವಿನ ಹಾಗೆ ವೃತ್ತಾಕಾರದಲ್ಲಿ, ವಾನರ ಸೇನೆ ರಾಮನ ಭಜನೆಗೆ ಕುಳಿತಂತೆ ಈ ಕೆತ್ತನೆ ಕಾಣುತ್ತದೆ.
ಮಂದಿರದಲ್ಲಿ ರಾಮಲಲ್ಲ ವಿಗ್ರಹವನ್ನು ಜ.22ರಂದು ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಬೆಂಗಳೂರಿನಿಂದ ಅಳಿಲು ಸೇವೆ!