ಡಿಸ್ಪುರ್: ರಾಮ ಜನ್ಮಭೂಮಿ ಕೇವಲ ರಾಜಕೀಯ ವಿಷಯವಲ್ಲ, ಬದಲಾಗಿ ಸಾಂಸ್ಕೃತಿಕ ವಿಷಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ.
ತೇಜ್ಪುರ ವಿಶ್ವವಿದ್ಯಾನಿಲಯದ 21ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನವರಿ 22 ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಂದು ಉಪಸ್ಥಿತರಿರುತ್ತಾರೆ ಎಂದರು.
ಇದೇ ವೇಳೆ ರಾಮಮಂದಿರದಿಂದ ಚುನಾವಣಾ ಲಾಭ ಪಡೆಯುವ ಬಗ್ಗೆ ಕೇಳಿದಾಗ, ಇದು ನಮಗೆ ಮತ ಪಡೆಯಲು ರಾಜಕೀಯ ವಿಷಯವಲ್ಲ, ರಾಮಜನ್ಮಭೂಮಿ ನಮಗೆ ಸಾಂಸ್ಕೃತಿಕ ವಿಷಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ಹೆಸರಿನಲ್ಲಿ ವಂಚನೆ – ಎಚ್ಚರಿಕೆಯಿಂದ ಇರುವಂತೆ ಭಕ್ತರಿಗೆ ಸಲಹೆ
ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಜನವರಿ 16 ರಿಂದ ಏಳು ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮ ದಿನವಾದ ಜನವರಿ 22 ರಂದು ಬೆಳಗ್ಗಿನ ಪೂಜೆಯ ನಂತರ ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದರು.
ಇದೇ ವೇಳೆ ದೇಶದ ಆರ್ಥಿಕತೆಯ ಬಗ್ಗೆ ಮಾತನಾಡಿದ ಸಿಂಗ್, 2047 ರ ವೇಳೆಗೆ ನಾವು ವಿಶ್ವದ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಲಿದ್ದೇವೆ ಎಂದು ಹೇಳಿದರು.