ಉಡುಪಿ: ಸ್ವಂತಕ್ಕೆ ಚಿಂತಿಸದೇ, ದೇಶಕ್ಕಾಗಿ ದುಡಿಯುವವನಿಗೆ ಮತ ಹಾಕಿದ್ದೇನೆ ಎಂದು ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಜಿಲ್ಲೆಯ ಕುಕ್ಕಿಕಟ್ಟೆಯ ಖಾಸಗಿ ಅನುದಾನಿತ ಶಾಲೆಯಲ್ಲಿ ಕುಟುಂಬ ಸಮೇತ ರಕ್ಷಿತ್ ಶೆಟ್ಟಿ ಮತದಾನದಲ್ಲಿ ಪಾಲ್ಗೊಂಡಿದ್ದರು. ‘ಅವನೇ ಶ್ರೀಮನ್ನಾರಾಯಣ’ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕಾಗಿ ದುಡಿಯುವ ನಾಯಕ ಬೇಕು. ಅಂತವರನ್ನು ನಾವು ಆಯ್ಕೆ ಮಾಡಬೇಕು. ಒಬ್ಬ ನಾಯಕ ಬಂದರೆ ಒಂದು ಲಕ್ಷ ಜನವಾದರು ಬಂದು ಸೇರಬೇಕು. ಅಂತಹ ನಾಯಕತ್ವದ ಗುಣ ನಮ್ಮ ಲೀಡರ್ ಗೆ ಇರಬೇಕು. ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂದರೆ ಮತದಾನ ಮಾಡುವುದು ನಮ್ಮ ಕರ್ತವ್ಯ. ಪ್ರಜೆಯಾಗಿ ನಾವು ಅದನ್ನು ಪಾಲಿಸಬೇಕು ಎಂದು ಎಲ್ಲರಿಗೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಪ್ರಜೆಯಾಗಿ ನಾವು ಪಾಲಿಸಬೇಕಾದ ಮೊದಲ ಕರ್ತವ್ಯ ಮತದಾನದಲ್ಲಿ ಭಾಗವಹಿಸುವುದು. ಯಾರು ನಮ್ಮನ್ನು ಆಳುತ್ತಾರೆ ಅನ್ನೋದು ಇಲ್ಲಿ ಮುಖ್ಯ, ದೇಶದ ಮೇಲೆ ನಮಗಿರುವ ಪ್ರೀತಿ ಇಲ್ಲಿಂದ ಆರಂಭ ಆಗುತ್ತೆ ಎಂದರು. ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ರಕ್ಷಿತ್ ಶೆಟ್ಟಿ ಸದ್ಯ ‘ಅವನೇ ಶ್ರೀಮನ್ನಾರಾಯಣ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.