ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ತೆಲಂಗಾಣದಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಇನ್ಸ್ಟಾದಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ.
ವಿಡಿಯೋದಲ್ಲಿ ರಾಖಿ, ಸ್ನೇಹಿತರೇ ಇಂದು ನನಗೆ ತುಂಬಾ ದುಃಖವಾಗುತ್ತಿದೆ. ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಆರೋಪಿಗಳು ನಂಬಿಕೆಗೆ ಅರ್ಹರಲ್ಲ ಎಂದು ದೇಶದ ಮಹಿಳೆಯರಿಗೆ ಹೇಳಲು ಇಷ್ಟಪಡುತ್ತೇನೆ. ಇವರು ಮಾನವೀಯತೆಯನ್ನು ನೋಡುವುದಿಲ್ಲ. ರಾತ್ರಿ ವೇಳೆ ಹೋಗುವಾಗ ಸುರಕ್ಷಿತವಾಗಿರಿ. ನಿಮ್ಮ ಮಾನವನ್ನು ನೀವೇ ಉಳಿಸಿಕೊಳ್ಳಿ. ಏಕೆಂದರೆ ನಿಮ್ಮ ಮಾನ ಉಳಿಸಲು ಇಲ್ಲಿ ಯಾರೂ ಬರುವುದಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರಿಗಳಿಗೆ ಜೈಲಿನಲ್ಲಿ ಮಟನ್ ಊಟ, ಹೈ ಸೆಕ್ಯೂರಿಟಿ
ಆರೋಪಿಗಳಿಗೆ ಗಲ್ಲಿಗೆ ಏರಿಸಬೇಕೆಂದು ನಾನು ಈ ದೇಶದ ಕಾನೂನಿಗೆ ಹೇಳಲು ಬಯಸುತ್ತೇನೆ. ಗಲ್ಲಿಗೇರಿಸಲು ಆಗಲಿಲ್ಲ ಎಂದರೆ ಅವರನ್ನು ನಪುಂಸಕನನ್ನಾಗಿ ಮಾಡಬೇಕು. ಇದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದರಿಂದ ಏನು ಆಗುತ್ತೆ ಎಂಬುದು ತಿಳಿಯುತ್ತದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದರಿಂದ ಭಾರತದ ಕಾನೂನು ಎಷ್ಟು ಕಠಿಣವಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದಳು.
ಇದೇ ವೇಳೆ ರಾಖಿ, ದೇಶದಲ್ಲಿ ಯಾವುದೇ ಮಹಿಳೆ ಜೊತೆ ಅತ್ಯಾಚಾರವಾಗಬಾರದು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನಾನು ಮೋದಿ ಅವರಿಗೆ, ಹೈದರಾಬಾದ್ ಪೊಲೀಸರಿಗೆ ಹಾಗೂ ಕಾನೂನಿಗೆ ಕೇಳಿಕೊಳ್ಳುತ್ತೇನೆ. ಎಲ್ಲಿಯವರೆಗೂ ಕಾನೂನು ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಅತ್ಯಾಚಾರ ನಿಲ್ಲುವುದಿಲ್ಲ. ಮೋದಿ ಸರ್ಕಾರ ಎದ್ದೇಳಿ. ನಾನು ಯುವತಿಗೆ ನ್ಯಾಯ ಕೇಳುತ್ತಿದ್ದೇನೆ. ಈಗ ನಾವು ನಮ್ಮ ಧ್ವನಿಯನ್ನು ಏರಿಸದಿದ್ದರೆ ಮುಂದೆ ಏನೂ ಆಗುವುದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.