ಬೆಂಗಳೂರು: ಕಾವೇರಿ ವಿಚಾರದಲ್ಲಿ ರಜಿನಿಕಾಂತ್ ಪದೇ ಪದೇ ಕನ್ನಡಿಗರ ವಿರುದ್ಧ ಮಾತನಾಡಿ ಕನ್ನಡಿಗರ ಮುನಿಸಿಗೆ ಕಾರಣರಾಗಿದ್ದಾರೆ. ಇದರಿಂದ ಜೂನ್ 7ರಂದು ಬಿಡುಗಡೆಗೊಳ್ಳುವ ಅವರ ಅಭಿನಯದ ತಮಿಳಿನ ‘ಕಾಳಾ ಕರಿಕಾಳನ್’ ಚಿತ್ರಕ್ಕೆ ನಿರ್ಬಂಧ ಹೇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲತಃ ಕನ್ನಡಿಗರಾಗಿರುವ ನಟ ರಜಿನಿಕಾಂತ ವರು ತಮಿಳುನಾಡಿನಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದು ಕನ್ನಡಿಗರ ಹೆಮ್ಮೆಗೆ ಕಾರಣವಾಗಿತ್ತು. ಆದರೆ ಅವರು ಕಾವೇರಿ ವಿಚಾರದಲ್ಲಿ ಕನ್ನಡಿಗರ ವಿರುದ್ಧವಾಗಿ ಹೇಳಿಕೆ ನೀಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕಕ್ಕೆ ಮಾರಕವಾಗಿರುವ ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ಪಟ್ಟು ಹಿಡಿದಿರುವ ಅವರಿಗೆ ಕರ್ನಾಟಕದಲ್ಲಿನ ಪರಿಸ್ಥಿತಿ ಅರ್ಥವಾಗದೆ ಇರುವುದು ನೋವಿನ ಸಂಗತಿಯಾಗಿದೆ.
ರಜಿನಿಕಾಂತ್ ಹೇಳಿಕೆಗೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಜಿನಿಕಾಂತ್ ರವರು ಮೂಲತಃ ಕನ್ನಡಿಗರಾಗಿದ್ದು ಕರ್ನಾಟಕ ವಿರುದ್ಧ ಯಾವುದೇ ಹೇಳಿಕೆಯನ್ನು ಅವರು ನೀಡಬಾರದಾಗಿತ್ತು. ಮುಂದಿನ ದಿನಗಳಲ್ಲಿ ಅವರು ಅಭಿನಯಿಸಿದ ತಮಿಳಿನ ಕಾಳಾ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣದಂತೆ ಕರ್ನಾಟಕ ಚಲನಚಿತ್ರ ಮಂಡಳಿಗೆ ದೂರು ನೀಡುವುದಾಗಿ ತಿಳಿಸಿದ್ದು. ಒಂದು ವೇಳೆ ಕಾಳಾ ಚಿತ್ರ ತೆರೆಕಂಡರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗೆಯೇ ಕಮಲ್ ಹಾಸನ್ರವರ ಚಿತ್ರವು ಕೂಡ ತೆರೆಕಾಣಬಾರದೆಂದು ಹೇಳಿಕೆ ನೀಡಿದ್ದಾರೆ.
ಕಾಲ ಚಿತ್ರವು ತಮಿಳಿನ ಬಹು ನಿರೀಕ್ಷಿತ ಚಿತ್ರವಾಗಿದ್ದು, ಸ್ವತಃ ರಜಿನಿಕಾಂತ್ ರವರ ಅಳಿಯ ಧನುಷ್ರವರು ನಿರ್ಮಿಸಿದ್ದಾರೆ. ಕಬಾಲಿ ಚಿತ್ರದ ನಿರ್ದೇಶಕರಾದ ಪ.ರಂಜಿತ್ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂತೋಷ್ ನಾರಾಯಣ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ನಾನಾ ಪಾಟೇಕರ್, ಹುಮಾ ಕ್ವಿರೇಷಿ, ಈಶ್ವರಿ ರಾವ್ ಸೇರಿದಂತೆ ಬಹು ತಾರಾಂಗಣವನ್ನು ಹೊಂದಿದೆ. ಕಾಳಾ ಚಿತ್ರವು ಜೂನ್ 7ರಂದು ವಿಶ್ವಾದ್ಯಾಂತ ತೆರೆಕಾಣಲಿದೆ.