ತೆಲುಗು ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಾಜಮೌಳಿ ವಿರುದ್ಧ ಕನ್ನಡಿಗರು ಅಸಮಾಧಾನ ಹೊರ ಹಾಕಿದ್ದಾರೆ. ರಾಜಮೌಳಿ ಒಬ್ಬ ಅವಕಾಶವಾದಿ ಎಂದು ಜರಿದಿದ್ದಾರೆ. ಅವರ ಸಿನಿಮಾಗಳು ರಿಲೀಸ್ ಆಗುವ ಹೊತ್ತಿನಲ್ಲಿ ಮಾತ್ರ, ಕನ್ನಡ ಹಾಗೂ ಕರ್ನಾಟಕ ನೆನಪಾಗುತ್ತದೆ. ಉಳಿದಂತೆ ಅವರು ಕನ್ನಡವನ್ನು ಮರೆಯುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ಮುಂದೆ ನೀವು ಕನ್ನಡಿಗರು ಅನಬೇಡಿ ಎಂದು ತಾಕೀತು ಕೂಡ ಮಾಡಿದ್ದಾರೆ.
ಅಷ್ಟಕ್ಕೂ ಕನ್ನಡಿಗರು ಗರಂ ಆಗಿರುವುದಕ್ಕೆ ಕಾರಣವೂ ಇದೆ. ಖಾಸಗಿ ವಾಹಿನಿಯಿಂದ ಖ್ಯಾತ ನಾಮರ ರೌಂಡ್ ಟೇಬಲ್ ಸಂದರ್ಶನವೊಂದನ್ನು ಏರ್ಪಡಿಸಿತ್ತು. ಇದರಲ್ಲಿ ಪೃಥ್ವಿರಾಜ್ ಸುಕುಮಾರನ್, ಕಮಲ್ ಹಾಸನ್, ರಾಜಮೌಳಿ, ಗೌತಮ್ ಮೆನನ್, ಲೋಕೇಶ್ ಕನಗರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜಮೌಳಿ ಕೇವಲ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರೋದ್ಯಮವನ್ನು ಮರೆತು ಬಿಟ್ಟಿದ್ದಾರೆ. ಇದೇ ಕನ್ನಡಿಗರನ್ನು ಕೆರಳಿಸಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಸೌಮ್ಯ ಉತ್ತರ
- Advertisement
- Advertisement
ಮಲಯಾಳಂನಲ್ಲಿ ಅತ್ಯುತ್ತಮ ಬರಹಗಾರರು ಮತ್ತು ನಟರಿದ್ದಾರೆ. ತಮಿಳು ಸಿನಿಮಾ ರಂಗವು ತಾಂತ್ರಿಕವಾಗಿ ಭಾರೀ ಶ್ರೀಮಂತ ಉದ್ಯಮ, ತೆಲುಗಿನಲ್ಲಿ ಸಾಕಷ್ಟು ಜನಪ್ರಿಯ ಸಿನಿಮಾಗಳು ಬಂದಿವೆ. ನಾವೆಲ್ಲರೂ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಕೊಡುತ್ತಾ ಬಂದಿದ್ದೇವೆ. ಮಲಯಾಳಂ ಸಿನಿಮಾ ರಂಗದ ಬರಹಗಾರರ ಬಗ್ಗೆ ನನಗೆ ಬಹಳಷ್ಟು ಪ್ರೀತಿ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ, ಕನ್ನಡ ಚಿತ್ರೋದ್ಯಮದ ಬಗ್ಗೆ ಒಂದು ಮಾತೂ ಕೂಡ ಅವರು ಆಡಲಿಲ್ಲ.
ಹಾಗಂತ ಅವರು ಕನ್ನಡ ಚಿತ್ರೋದ್ಯಮವನ್ನು ಪೂರ್ತಿ ಕಡೆಗಣಿಸಲಿಲ್ಲ. ಅವರ ಮಾತು ಕೇವಲ ಕಾಂತಾರ ಸಿನಿಮಾದ ಬಗ್ಗೆ ಮಾತ್ರವಿತ್ತು. ಕನ್ನಡದಲ್ಲಿ ಸಾಕಷ್ಟು ಪ್ರಯೋಗಾತ್ಮಕ ಮತ್ತು ಒಳ್ಳೊಳ್ಳೆ ಸಿನಿಮಾಗಳು ಬಂದಿದೆ. ಆದರೆ, ಕೇವಲ ಕಾಂತಾರದ ಬಗ್ಗೆ ಮಾತಾಡಿ, ಅಷ್ಟಕ್ಕೆ ಸುಮ್ಮನಾಗಿದ್ದು ನೆಟ್ಟಿಗರಿಗೆ ಕೋಪ ತರಿಸಿದೆ. ಮೂಲತಃ ಕನ್ನಡಿಗರೇ ಆಗಿರುವ ರಾಜಮೌಳಿ, ಕನ್ನಡ ಚಿತ್ರೋದ್ಯಮದ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಕಿತ್ತು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.