ರಾಯಚೂರು: ಕಳೆದ ರಾತ್ರಿ ಸುರಿದ ಮಳೆಗೆ ಗುಡಿಸಲಿನ ಗೋಡೆ ಕುಸಿದು ಅಜ್ಜಿ ಮತ್ತು ಮೊಮ್ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ರಾಯಚೂರು ತಾಲೂಕಿನ ಕೊತ್ತದೊಡ್ಡಿಯಲ್ಲಿ ನಡೆದಿದೆ.
ಗೋವಿಂದಮ್ಮ (60), ಮಲ್ಲಿಕಾರ್ಜುನ (5 ತಿಂಗಳು) ಮತ್ತು ಶಿವಾನಿ (5 ವರ್ಷ) ಮೃತ ದುರ್ದೈವಿಗಳು. ತಾಯಿ ಸುಜಾತ ಹಾಗೂ ಮಗಳು ಗುರುದೇವಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುರುವಾರ ರಾತ್ರಿ ಅಜ್ಜಿ ಮೊಮ್ಮಕ್ಕಳು ಮದುವೆ ಕಾರ್ಯಕ್ರಮಕ್ಕೆ ಹೋಗಿ ಬಂದು ಗುಡಿಸಲಿನಲ್ಲಿ ಮಲಗಿದ್ದರು. ಇದೇ ವೇಳೆ ರಾಯಚೂರು ಜಿಲ್ಲೆಯಾದ್ಯಂತ ರಾತ್ರಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಇದರಿಂದ ಗುಡಿಸಲಿನ ಗೋಡೆ ಏಕಾಏಕಿ ಕುಸಿದಿದೆ. ಪರಿಣಾಮ ಮಲಗಿದ್ದ 5 ತಿಂಗಳ ಮಗು ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಯಚೂರು ಸಂಸದ ಅಮರೇಶ್ವರ ನಾಯಕ್ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಜೊತೆಗೆ ಸರ್ಕಾರದಿಂದ ಬರುವ ಪರಿಹಾರವನ್ನು ಕೂಡಲೇ ತಲುಪುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.