ನವದೆಹಲಿ: ರೈಲ್ವೇ ಬೋರ್ಡ್ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದಲ್ಲಿ ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಾಂಸಾಹಾರ ಸಿಗುವುದಿಲ್ಲ.
ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ವಿಶೇಷ ಸಂಭ್ರಮಾಚರಣೆ ಪ್ರಯುಕ್ತ 2018, 2019, 2020 ರ ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ಸಸ್ಯಾಹಾರ ದಿನವನ್ನಾಗಿ ಆಚರಿಸಲು ಮುಂದಾಗಿದೆ. ಸಸ್ಯಾಹಾರದ ರಾಯಭಾರಿಯಾಗಿದ್ದ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ಅಕ್ಟೋಬರ್ 2 ರಂದು ರಾಷ್ಟ್ರೀಯ ಸ್ವಚ್ಛತಾ ದಿವಸದ ಜೊತೆಗೆ ಸಸ್ಯಾಹಾರ ದಿನವನ್ನಾಗಿ ಆಚರಣೆ ಮಾಡಲು ಅನುಮತಿ ನೀಡುವಂತೆ ರೈಲ್ವೇ ಬೋರ್ಡ್ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.
ಗಾಂಧೀಜಿಯರ 150ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಸಂಸ್ಕೃತಿ ಇಲಾಖೆ ಹೊರತಂದಿರುವ ಲೋಗೋವನ್ನು ರೈಲ್ವೆ ಕೋಚ್ ಗಳ ಹೊರ ಭಾಗದಲ್ಲಿ ಬಾಗಿಲ ಬಳಿ ಪ್ರಯಾಣಿಕರಿಗೆ ಕಾಣುವಂತೆ ಹಾಕಲು ಇಲಾಖೆಯ ಅನುಮತಿಯನ್ನು ಕೋರಿದೆ ಎಂದು ತಿಳಿಸಿದೆ.
ಮಾರ್ಚ್ 12 ರಂದು ದಂಡಿ ಸತ್ಯಾಗ್ರಹದ ಸ್ಮರಣಾರ್ಥ ಸಬರಮತಿಯಿಂದ ಸ್ವಚ್ಛತಾ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಾಗುವುದು. ಟಿಕೆಟ್ ಗಳ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವಿರುತ್ತದೆ ಎಂದು ತಿಳಿಸಿದೆ.
ಸಸ್ಯಾಹಾರ ದಿನಾಚಾರಣೆಯನ್ನು ಯಶಸ್ವಿಯಾಗಿ ಆಚರಿಸಬೇಕು. ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಾಗೂ ಅವರ ಕಾರ್ಯಗಳ ಕುರಿತಾದ ವಿಡಿಯೋಗಳನ್ನು ಎಲ್ಲ ನಿಲ್ದಾಣಗಳಲ್ಲಿ ಪ್ರದರ್ಶನ ಮಾಡಲು ರೈಲ್ವೇ ಇಲಾಖೆ ಸಿದ್ಧತೆ ನಡೆಸುತ್ತಿದೆ.
150ನೇ ಹುಟ್ಟು ಹಬ್ಬದ ವಿಶೇಷ ಸಂಭ್ರಮಾಚರಣೆಗೆ ಸಮಿತಿ ರಚನೆಯಾಗಿದ್ದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಒಂದು ತಿಂಗಳ ಹಿಂದೆ ಮೊದಲ ಸಭೆ ನಡೆದಿದೆ.