ಗದಗ: ಬೃಹತ್ ರೈಲ್ವೇ ಪಿಲ್ಲರ್ ಮನೆಗಪ್ಪಳಿಸಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತವೊಂದು ಅಚ್ಚರಿಯ ರೀತಿಯಲ್ಲಿ ತಪ್ಪಿರುವಂತಹ ಘಟನೆ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಅಂಬೇಡ್ಕರ್ ನಗರದ ಬಳಿ ಕಳೆದ ಒಂದೂವರೆ ವರ್ಷದಿಂದ ರೈಲ್ವೇ ಫ್ಲೈ ಓವರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಬೃಹತ್ ಪಿಲ್ಲರ್ ಅಳವಡಿಸುವಾಗ ಹೈಡ್ರೋ ಮಶಿನ್ ಪೈಪ್ ಕಟ್ ಆಗಿದೆ. ಆ ಪಿಲ್ಲರ್ ಮನೆಯ ಮೇಲೆ ಬಿದ್ದ ಪರಿಣಾಮ ಮನೆ ಜಖಂ ಆಗಿದೆ. ಜಖಂ ಆದ ಕೋಣೆಯ ಜೋಳಿಗೆಯಲ್ಲಿ ಮಲಗಿದ್ದ 8 ತಿಂಗಳ ಮಗು ಮಹಮ್ಮದ್, ಬಾಣಂತಿ ರೇಶ್ಮಾ ಹಾಗೂ ಮತೋರ್ವ ಗರ್ಭಿಣಿ ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದ್ದಾರೆ.
ಆಂಧ್ರ ಪ್ರದೇಶ ಮೂಲದ ಎಂ.ವಿ ಕನ್ಸ್ಟ್ರಕ್ಷನ್ ಮಾಲಿಕತ್ವದ ಮುನಿ ವೆಂಕಟೇಶ್ ಈ ಕಾಮಗಾರಿ ಗುತ್ತಿಗೆದಾರರು. ಈ ಸೇತುವೆ ಕಾಮಗಾರಿಗೆ ಗದಗನ ಅಂಬೇಡ್ಕರ್, ಜನತಾ ಕಾಲೋನಿ ಜನರು ಬೇಸತ್ತು ಹೋಗಿದ್ದಾರೆ. ಈ ಕಾಮಗಾರಿಯಿಂದ ಈ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ಇಂಥ ಅಪಾಯಕಾರಿ ಕಾಮಗಾರಿ ನಡೆದರೂ ಯಾವುದೇ ಮುಂಜಾಗ್ರತಾ ಕೈಗೊಂಡಿಲ್ಲ. ಕಾಮಗಾರಿ ಪ್ರತಿಯಲ್ಲಿದೆ ಅಂತ ಸೂಚನಾ ಫಲಕ ಕೂಡ ಅಳವಡಿಸಿಲ್ಲ ಎಂದು ಮನೆಯಲ್ಲಿದ್ದ ಗರ್ಭಿಣಿ ಹೇಳಿದ್ದಾರೆ.
ಪಿಲ್ಲರ್ ಬಿದ್ದ ಸದ್ದು ಕೇಳಿ ಹೌಹಾರಿ ಬಾಣಂತಿ ಮಗು ಎತ್ತಿಕೊಂಡು ಓಡಿ ಬಂದಿದ್ದಾರೆ. ಬೃಹತ್ ಪಿಲ್ಲರ್ ಅಳವಡಿಸುವ ಗುತ್ತಿಗೆದಾರರು ರಸ್ತೆ ಬಂದ ಮಾಡಿಲ್ಲ. ಇದೇ ವೇಳೆ ಟ್ರ್ಯಾಕ್ಟರ್ ನಲ್ಲಿ 15ಕ್ಕೂ ಹೆಚ್ಚು ಜನರು ಇದೇ ಕಾಮಗಾರಿ ನಡೆಯುವ ರಸ್ತೆಯಲ್ಲೇ ಜಮೀನು ಕೆಲಸಕ್ಕೆ ಹೊರಟಿದ್ದರು. ಅವರು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಂ.ವಿ ಕನ್ಸ್ಟ್ರಕ್ಷನ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆ ನಡೆಯತ್ತಿದ್ದಂತೆ ಸ್ಥಳದಲ್ಲೇ ಬೃಹತ್ ಯಂತ್ರೋಪಕರಣಗಳು ಬಿಟ್ಟು ಕೆಲಸಗಾರರು ಪರಾರಿಯಾಗಿದ್ದಾರೆ. ಬೃಹತ್ ಪಿಲ್ಲರ್ ಬಿಳುತ್ತಿದ್ದಂತೆ ಕಾರ್ಮಿಕ ಮೇಲಿನಿಂದ ಬಿದ್ದು, ಕೈ, ಕಾಲು ಮುರಿತವಾಗಿದೆ. ಈ ಅವಘಡ ನಡೆದರೂ ರೈಲ್ವೇ ಇಲಾಖೆಯ ಯಾವೊಬ್ಬ ಅಧಿಕಾರಗಳು ಸ್ಥಳಕ್ಕೆ ಬಂದಿಲ್ಲ.