ರಾಯಚೂರು: ಅಬಕಾರಿ ಹಾಗೂ ರಾಯಚೂರಿನ ವಿವಿಧ ಠಾಣೆ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.
ನರಸಿಂಹಲು ಅಲಿಯಾಸ್ ಬ್ರೂಸ್ಲಿ ಬಂಧಿತ ಕುಖ್ಯಾತ ಸಿಎಚ್ ಪೌಡರ್ ಕಲಬೆರಕೆ ಸೇಂದಿ ದಂಧೆಕೋರ. ವಿವಿಧ ಠಾಣೆಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳನ್ನ ಎದುರಿಸುತ್ತಿರುವ ಆರೋಪಿ ನರಸಿಂಹಲು ಬ್ರೂಸ್ಲಿ ಸೇಂದಿ ತಯಾರಿಕೆ ವೇಳೆ ಸಿಕ್ಕಿಬಿದ್ದಿದ್ದಾನೆ.
ರಾಯಚೂರಿನ ಮೈಲಾರನಗರದಲ್ಲಿ ವಿವಿಧೆಡೆ ಕಲಬೆರಿಕೆ ಸೇಂದಿ ಅಡ್ಡೆಗಳನ್ನ ನಡೆಸುತ್ತಿದ್ದ ಬ್ರೂಸ್ಲಿ ಅಬಕಾರಿ ಪೊಲೀಸರ ದಾಳಿ ವೇಳೆ ಸೇಂದಿ ಸಹಿತ ಸಿಕ್ಕಿಬಿದ್ದಿದ್ದಾನೆ. 15 ಲೀಟರ್ ಕಲಬೆರಕೆ ಸೇಂದಿ, 2 ಕೆ.ಜಿ ಸಿಎಚ್ ಪೌಡರ್ ಹಾಗೂ ಸೇಂದಿ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ಜಪ್ತಿಮಾಡಿದ್ದಾರೆ.
ಆರೋಪಿಯನ್ನು ಗಡಿಪಾರು ಮಾಡಲು ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಮುಂದಾಗಿದ್ದು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಸಿದ್ಧತೆ ನಡೆಸಿವೆ. ಆದರೆ ಈ ಹಿಂದೆಯೂ 25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದ ಬ್ರೂಸ್ಲಿ ಗಡಿಪಾರಾಗಿದ್ದ. ಅದಾದ ಬಳಿಕವೂ ಯಾವುದೇ ಪರಿವರ್ತನೆಯಾಗದೆ ಪುನಃ ದಂಧೆಯನ್ನ ಮುಂದುವರಿಸಿದ್ದಾನೆ.