ರಾಯಚೂರು: ಕರ್ನಾಟಕ ಪೊಲೀಸ್ ಇಲಾಖೆಗೆ ಮತ್ತೊಂದು ಗರಿಮೆ ಸಿಕ್ಕಿದೆ. ರಾಯಚೂರು ಜಿಲ್ಲೆಯ ಮಾನವಿ ಪೊಲೀಸ್ ಠಾಣೆಗೆ ಕೇಂದ್ರ ಸರ್ಕಾರ ಮನಸೋತಿದೆ. ದೇಶದ ಟಾಪ್ 10 ಮಾದರಿ ಠಾಣೆಗಳಲ್ಲಿ ರಾಯಚೂರಿನ ಮಾನವಿ ಪೊಲೀಸ್ ಠಾಣೆಗೆ 5ನೇ ಸ್ಥಾನ ದೊರೆತಿದ್ದು, ವಿವಿಧ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಗೃಹ ಇಲಾಖೆ ರ್ಯಾಂಕ್ ನೀಡಿದೆ.
2021ರ ಸಾಲಿನಲ್ಲಿ ದೇಶದ 5ನೇ ಅತ್ಯುತ್ತಮ ಪೊಲೀಸ್ ಠಾಣೆಯಾಗಿ ಮಾನವಿ ಠಾಣೆ ಆಯ್ಕೆಯಾಗಿದೆ. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾನವಿ ಪೊಲೀಸ್ ಠಾಣೆ ಸಿಬ್ಬಂದಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಮೇ ಅಂತ್ಯಕ್ಕೆ ರಾಜ್ಯದ ಜನತೆಗೆ ಗುಡ್ ನ್ಯೂಸ್?
ಜನ ಸಂಪರ್ಕ, ಪೊಲೀಸ್ ಠಾಣಾ ಕಟ್ಟಡದ ಸುವ್ಯವಸ್ಥೆ, ಸಿಬ್ಬಂದಿ ಶಿಸ್ತು ಹಾಗೂ ಕಾರ್ಯದಕ್ಷತೆ, ಕಡತಗಳ ವಿಲೇವಾರಿ, ಮೂಲಭೂತ ಸೌಕರ್ಯಗಳು, ಅಪರಾಧ ತಡೆಗಟ್ಟುವಲ್ಲಿ ಕೈಗೊಂಡ ಮುಂಜಾಗೃತಾ ಕ್ರಮಗಳು, ಸಂಚಾರ ಸುರಕ್ಷತೆಗಾಗಿ ರಸ್ತೆಯಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಗಟ್ಟುವಲ್ಲಿ ಪೋಲೀಸರ ಕಾರ್ಯ ಹೀಗೆ ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಟಾಪ್ 10 ಪಟ್ಟಿಯಲ್ಲಿ ರ್ಯಾಂಕಿಂಗ್ ನೀಡಲಾಗುತ್ತದೆ. ಇದರಲ್ಲಿ ರಾಯಚೂರಿನ ಮಾನವಿ ಪೊಲೀಸ್ ಠಾಣೆ ದೇಶದಲ್ಲಿಯೇ 5ನೇ ರ್ಯಾಂಕ್ ಪಡೆದಿದೆ. ಇದನ್ನೂ ಓದಿ: ಮೈಕ್ ವಾರ್ ಗಡುವು ಇಂದು ಅಂತ್ಯ- ಅವಧಿ ವಿಸ್ತರಣೆಗೆ ಮುಸ್ಲಿಂ ಮುಖಂಡರ ಆಗ್ರಹ
ಟಾಪ್ 10 ನಲ್ಲಿ ಆಯ್ಕೆಯಾಗಿರುವುದರಿಂದ ಮಾನವಿ ಠಾಣೆಗೆ ಕೇಂದ್ರ ಸರ್ಕಾರದ ಬಿಪಿಆರ್ಡಿಯಿಂದ ವಿಶೇಷ ಸೌಲಭ್ಯಗಳು ದೊರೆತಿವೆ. ಪೊಲೀಸ್ ಠಾಣೆಯ ಪೀಠೋಪಕರಣ, ಲ್ಯಾಪ್ಟಾಪ್ ಸೇರಿದಂತೆ ಕೇಂದ್ರ ಸರ್ಕಾರದ ವಿಶೇಷ ಸೌಲಭ್ಯಗಳನ್ನು ಮಾನವಿ ಠಾಣೆ ಪಡೆದಿದೆ. ಇಡೀ ದೇಶದಲ್ಲೇ 5ನೇ ಸ್ಥಾನ ಪಡೆದಿರುವುದಕ್ಕೆ ಠಾಣೆಯ ಸಿಬ್ಬಂದಿ, ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.