ಹುಬ್ಬಳ್ಳಿ: ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ದೃಷ್ಟಿಯಿಂದ ನಿರ್ಮಾಣ ಮಾಡುತ್ತಿರುವ ರಾಯಚೂರು, ಕಾರವಾರ, ಶಿವಮೊಗ್ಗ, ವಿಜಯಪುರದ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರವಾಗಿ ಆರಂಭಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ರಾಜ್ಯಮಟ್ಟದ ಜಿಲ್ಲಾ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾಸಮ್ಮೇಳನವನ್ನು ಉದ್ದೇಶಿಸಿ ಭಾಷಣ ಮಾಡಿದ ಸಿಎಂ, ಕರ್ನಾಟಕ ಅತ್ಯಂತ ಪ್ರಗತಿಪರವಾಗಿರುವ ರಾಜ್ಯವಾಗಿದೆ. ಇದಕ್ಕೆ ನಮ್ಮ ಪೂರ್ವಜರು ಮತ್ತು ಮೈಸೂರು ಸಂಸ್ಥಾನದ ಮಹಾರಾಜರಿಗೆ ಧನ್ಯವಾದಗಳು. ವಿಶ್ವದ 500 ಫಾರ್ಚೂನ್ ಕಂಪನಿಗಳಲ್ಲಿ 400 ಕಂಪನಿಗಳು ಬೆಂಗಳೂರಿನಿಂದ ರನ್ ಆಗುತ್ತಿವೆ. ಇದು ಹೆಮ್ಮೆಯ ವಿಷಯ ಎಂದು ನುಡಿದರು. ಇದನ್ನೂ ಓದಿ: ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಚಿತ್ರದುರ್ಗದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಆರಂಭವಾಗಬೇಕು. ಹೀಗಾಗಿ ಉತ್ತೇಜನ ನೀಡುವ ದೃಷ್ಟಿಯಿಂದ ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಧಾರವಾಡದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಆರಂಭ ಮಾಡುತ್ತೇವೆ. ಜೊತೆಗೆ 6 ವಿಶೇಷ ಟೌನ್ ಶಿಪ್ ಆರಂಭ ಮಾಡಲಾಗುವುದು. ರಾಜ್ಯದಲ್ಲಿ ನೂತನ ಆರ್ಎನ್ಡಿ ಮತ್ತು ಎಂಪ್ಲಾಯ್ಮೆಂಟ್ ಪಾಲಿಸಿ ತರಲಾಗುತ್ತಿದೆ. ಆಸ್ತಿ ತೆರಿಗೆ ವಿಚಾರವಾಗಿ ನೂತನ ನೀತಿ ತರಲಾಗುತ್ತದೆ ಎಂದರು. ಇದನ್ನೂ ಓದಿ: 40% ಕಮಿಷನ್ ರಾಜ್ಯ ಸರ್ಕಾರದ ಬಹುದೊಡ್ಡ ಸಾಧನೆ – ಬಿಜೆಪಿ ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರ ಟೀಕೆ
ಇದೀಗ ದುಡ್ಡೇ ದೊಡ್ಡಪ್ಪ ಎನ್ನುವ ಕಾಲ ಬದಲಾಗಿದೆ. ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲ ಬಂದಿದೆ. ರಾಜ್ಯ ಶ್ರೀಮಂತವಾಗುವ ಬದಲು ರಾಜ್ಯದ ಜನತೆ ಶ್ರೀಮಂತವಾಗಬೇಕು. ಕರ್ನಾಟಕ ಬೆಳೆಯಬೇಕು ಎಂದರೆ ಮೊದಲು ಉದ್ಯಮದಾರರು ಬೆಳೆಯಬೇಕು. ಆಹಾರ ಧಾನ್ಯಗಳ ಮೇಲೆ ಜಿಎಸ್ಟಿ ವಿಚಾರವಾಗಿ ಚೇಂಬರ್ ಆಫ್ ಕಾಮರ್ಸ್ ಸಭೆ ಕರೆದಿದ್ದೇನೆ. ಈ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ನಾನು ಅನುಮೋದನೆ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.