ರಾಯಚೂರು: ರೈತರು ಬಿಜೆಪಿ ಸಂಸದ ಸಂಗಣ್ಣ ಕರಡಿ ಹಾಗೂ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅವರನ್ನು ಸೇರಿದಂತೆ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಮಸ್ಕಿಯಲ್ಲಿ 5ಎ ಕಾಲುವೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ನೀರಾವರಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಲು ರೈತರು ಕಾಯುತ್ತಿದ್ದರು. ಆದರೆ ಬಿಜೆಪಿ ಕಾರ್ಯಕ್ರಮಕ್ಕೆ ರವಿಕುಮಾರ್ ಗೈರಾದರು, ಉಳಿದ ಮುಖಂಡರು ರೈತರ ಸಮಸ್ಯೆ ಕೇಳಲಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ತರಾಟೆಗೆ ತೆಗೆದುಕೊಂಡರು.
ಇದಕ್ಕೂ ಮೊದಲು ಪೌರತ್ವ ತಿದ್ದುಪಡೆ ಕಾಯ್ದೆ ಅಭಿನಂದನಾ ಸಭೆಯಲ್ಲಿ ಸಚಿವ ಶ್ರೀರಾಮುಲು ಭಾವಚಿತ್ರ ಹಾಕದಿದ್ದಕ್ಕೆ ಬಿಜೆಪಿ ಕಾರ್ಯಕರ್ತರೇ ಸಭೆಯನ್ನ ಬಹಿಷ್ಕರಿಸಿ ಮುಖಂಡರನ್ನ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ವಾಕ್ ಸಮರ ನಡೆಯಿತು. ಒಂದೇ ದಿನ ಕಾರ್ಯಕರ್ತರು ಹಾಗೂ ರೈತರಿಂದ ಬಿಜೆಪಿ ಮುಖಂಡರು ಎರಡೆರಡು ಬಾರಿ ಛೀಮಾರಿ ಹಾಕಿಸಿಕೊಂಡಂತಾಗಿದೆ.
ನಾರಾಯಣಪುರ ಬಲದಂಡೆಯ 5 ಎ ಕಾಲುವೆಗಾಗಿ ಕಳೆದ ಒಂದು ದಶಕದಿಂದ ಈ ಭಾಗದ ರೈತರು ಹೋರಾಟ ನಡೆಸಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ದಶಕದಿಂದ ಭರವಸೆ ಮಾತು ಹೇಳುತ್ತಿದ್ದೀರಿ, ಎಷ್ಟು ದಿನ ಹೀಗೆ ಎಂದು ಅನ್ನದಾತರು ತರಾಟೆಗೆ ತೆಗೆದುಕೊಂಡರು. ರೈತರನ್ನು ಸಂಧಾನ ಮಾಡಲು ಮುಂದಾದ ಬಿಜೆಪಿ ನಾಯಕರು ನಂದವಾಡಗಿ ಏತನೀರಾವರಿ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಿದರು. ಇದಕ್ಕೆ ರೈತರು ನಮಗೆ ನಂದವಾಡಗಿ ಬೇಡವೇ ಬೇಡ. 5ಎ ಜಾರಿ ಮಾಡಿ ಎಂದು ಪಟ್ಟು ಹಿಡಿದರು.
ರೈತರನ್ನು ಸಮಾಧಾನಗೊಳಿಸಲು ಬಿಜೆಪಿ ನಾಯಕರು ವಿಫಲಯತ್ನ ನಡೆಸಿದರು. ಆದರೆ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಸುಳಿವು ನೀಡಿದ ರೈತರು ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತದಾನದಿಂದ ಹಿಂದೆ ಉಳಿಯಬೇಕಾಗುತ್ತದೆ. ಉಪಚುನಾವಣೆ ಘೋಷಣೆಯೊಳಗೆ 5 ಎ ಜಾರಿಗೊಳಿಸಲು ರೈತರು ಒತ್ತಾಯಿಸಿದರು.