ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿ ತಟದ ನರಕಲದಿನ್ನಿ ಗ್ರಾಮದಲ್ಲಿ ಏಕಾಏಕಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಆತಂಕಕ್ಕೊಳಪಡಿಸಿದೆ.
ತಡರಾತ್ರಿ ಗ್ರಾಮದೊಳಗೆ ಬಂದಿರುವ ಮೊಸಳೆ ಗ್ರಾಮದ ಹೊರವಲಯದಲ್ಲಿರುವ ರೈತರೊಬ್ಬರ ದನದ ಕೊಟ್ಟಿಗೆಯಲ್ಲಿ ಅಡಗಿತ್ತು. ಬೆಳಗ್ಗೆ ಮೊಸಳೆಯನ್ನು ಗಮನಿಸಿದ ಗ್ರಾಮಸ್ಥರು ಎಚ್ಚೆತ್ತಿದ್ದರಿಂದ ಯಾವುದೇ ಅಪಾಯವಾಗಿಲ್ಲ.
ಮೊಸಳೆಯನ್ನು ಕಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಅದೃಷ್ಟವಶಾತ್ ಮೊಸಳೆಯಿಂದ ಗ್ರಾಮದಲ್ಲಿ ಯಾವುದೇ ಕೆಡುಕಾಗಿಲ್ಲ. ಆತಂಕಗೊಂಡಿರುವ ಕೆಲ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಮೊಸಳೆಯನ್ನು ಗಾಯಗೊಳಿಸಿದ್ದಾರೆ.
ನದಿ ಪಕ್ಕದಲ್ಲೆ ಗ್ರಾಮ ಇರುವುದರಿಂದ ಆಹಾರ ಹುಡುಕಿಕೊಂಡು ಮೊಸಳೆ ಗ್ರಾಮಕ್ಕೆ ಬಂದಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಈಗ ರಾತ್ರಿ ವೇಳೆ ಓಡಾಡಲು ಗ್ರಾಮಸ್ಥರು ಹೆದರಿಕೊಂಡಿದ್ದಾರೆ.