– ಇಬ್ಬರು ಪೊಲೀಸರು ಅಮಾನತು
ರಾಯಚೂರು: ಸಿಎಂ ಗ್ರಾಮ ವಾಸ್ತವ್ಯ ಆಗಮಿಸುತ್ತಿದ್ದಾಗ ಪ್ರತಿಭಟಿಸಿದ 50 ಮಂದಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ವಿರುದ್ಧ ಕೇಸ್ ದಾಖಲಾಗಿದೆ.
ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಒಂದು ದಿನದ ಶಾಲಾ ವಾಸ್ತವ್ಯಕ್ಕೆ ಹೋಗುತ್ತಿದ್ದ ಸಿಎಂ ಬಸ್ಸನ್ನು ತಡೆದು ರಾಯಚೂರಿನ ಸಕ್ರ್ಯೂಟ್ ಹೌಸ್ ಮುಂದೆ ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಸಿಎಂ ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದರು.
ಈಗ ಸಿಎಂ ವಿರುದ್ಧ ಪ್ರತಿಭಟನೆ ಮಾಡಿದ 50 ಜನ ಕಾರ್ಮಿಕರ ವಿರುದ್ಧ ರಾಯಚೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಡಾ ಸಿ.ಬಿ ವೇದಮೂರ್ತಿ ನಿಯಮ ಉಲ್ಲಂಘಿಸಿ ಪ್ರತಿಭಟಿಸಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಸಿಎಂ ಭದ್ರತೆ ವೈಫಲ್ಯದ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಪಿಎಸ್ಐ ಹಾಗೂ ಯರಗೇರಾ ಸಿಪಿಐ ಅವರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಮಾದಿಗ ಜಾಗೃತಿ ಸೇನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.
ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕ ಹಾಗೂ ಉತ್ತಮ ಅಧಿಕಾರಿಗಳು ಆಗಿದ್ದಾರೆ. ವಿನಾಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಆಕ್ರೋಶ ಕೂಗುತ್ತಿದ್ದಾರೆ.