ತಿರುವನಂತಪುರಂ: ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಹಾನಿ ಮಾಡಿದ ಆರೋಪದ ಮೇಲೆ ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಜೂನ್ 24 ರಂದು ಸಿಪಿಎಂ ವಿದ್ಯಾರ್ಥಿ ಘಟಕ ಎಸ್ಎಫ್ಐ ಸದಸ್ಯರು ವಯನಾಡಿನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಚೇರಿಯನ್ನು ಧ್ವಂಸಗೊಳಿಸಿದಾಗ ಈ ಘಟನೆ ಸಂಭವಿಸಿತ್ತು. ಗಲಭೆ ವೇಳೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಕಚೇರಿಯ ಗೋಡೆಯಿಂದ ಕೆಳಗೆ ಎಳೆದಿರುವುದು ಕಂಡುಬಂದಿದೆ. ಅತ್ತ ಎಸ್ಎಫ್ಐ ವ್ಯಕ್ತಿಗಳು ಭಾವಚಿತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಇತ್ತ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಿಪಿಎಂ ಆರೋಪ ಮಾಡುತ್ತಿದೆ. ಇದನ್ನೂ ಓದಿ: Liquor Policy Scam – ಸಿಸೋಡಿಯಾ ಮೇಲೆ ಸಿಬಿಐ ದಾಳಿ ಮಾಡಿದ್ದು ಯಾಕೆ?
ಬಂಧಿತ ಕಾಂಗ್ರೆಸ್ ಸದಸ್ಯರನ್ನು ವಿ.ನೌಶಾದ್, ಕೆ.ಎ.ಮುಜೀಬ್, ಎಸ್.ಆರ್.ರಾಹುಲ್ ಮತ್ತು ಕೆ.ಆರ್.ರತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್ ಎಂಬಾತ ರಾಹುಲ್ ಗಾಂಧಿ ಕಚೇರಿಯ ಸಹಾಯಕ. ಈ ಬಂಧನ ರಾಜಕೀಯ ಪ್ರೇರಿತ ಎಂದು ವಿಪಕ್ಷಗಳು ಆರೋಪಿಸುತ್ತಿವೆ.
ಅಂದು ಮಧ್ಯಾಹ್ನ 3:54 ರ ಸುಮಾರಿಗೆ ಸಂಸದರ ಕಚೇರಿಗೆ ನುಗ್ಗಿದ್ದ ಎಲ್ಲಾ ಎಸ್ಎಫ್ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಛಾಯಾಗ್ರಾಹಕರೊಬ್ಬರು ಅಪರಾಧ ನಡೆದ ಸ್ಥಳದ ಫೋಟೋಗಳನ್ನು ಕ್ಲಿಕ್ಕಿಸಿದ್ದ ಸಂದರ್ಭದಲ್ಲಿ ಗೋಡೆಯ ಮೇಲೆ ಗಾಂಧಿ ಭಾವಚಿತ್ರವು ಹಾಗೇ ಇತ್ತು. ಎಸ್ಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದ ನಂತರ, ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯೊಳಗೆಯೇ ಇದ್ದರು. ಸಂಜೆಯ ನಂತರ ಪೊಲೀಸ್ ಛಾಯಾಗ್ರಾಹಕ ಮತ್ತೆ ಅಪರಾಧದ ದೃಶ್ಯದ ಫೋಟೋಗಳನ್ನು ತೆಗೆದುಕೊಂಡಾಗ, ಭಾವಚಿತ್ರವು ಹಾನಿಗೊಳಗಾದ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರ ಹೇಳಿಕೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜುಲೈ 2 ರಂದು ವಿಧಾನಸಭೆಗೆ ತಿಳಿಸಿದ್ದರು. ಇದನ್ನೂ ಓದಿ: ಸಿಬಿಐ ದಾಳಿ ಬೆನ್ನಲ್ಲೇ ಹೊಸ ಮಿಸ್ಡ್ಕಾಲ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್
ಗಲಭೆಯ ನಂತರ ಕಚೇರಿಗೆ ಪ್ರವೇಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಭಾವಚಿತ್ರವನ್ನು ನೆಲದ ಮೇಲೆ ಎಸೆದರು ಎಂದು ಸಿಪಿಎಂ ಆರೋಪಿಸಿದೆ. ಆದರೆ ಕಾಂಗ್ರೆಸ್ ಸಿಪಿಎಂ ಮೇಲೆ ಆರೋಪ ಮಾಡುತ್ತಿದೆ.