ದಾವಣಗೆರೆ: ಮಧ್ಯ ಕರ್ನಾಟಕದ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮವೊಂದಲ್ಲಿ ಮಹಿಳೆಯೊಬ್ಬರು ಲಿಂಗಾಯತ ಧರ್ಮದ ಕುರಿತ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಕ್ ನೀಡಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯಲ್ಲಿ ಎರಡನೇ ದಿನ ಪ್ರವಾಸ ಕೈಗೊಂಡ ರಾಹುಲ್ ಗಾಂಧಿ, ಬಿಐಇಟಿ ಸಭಾಂಗಣ ದಲ್ಲಿ ಏರ್ಪಡಿಸಿದ್ದ ವರ್ತಕರ ಜೊತೆಗಿನ ಜಿಎಸ್ಟಿ ಕುರಿತ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಂವಾದದಲ್ಲಿ ವರ್ತಕರು ಕೇಳುವ ಪ್ರಶ್ನೆಗೆ ಉತ್ತರಿಸಿ ಜಿಎಸ್ಟಿ ಬಗ್ಗೆ ಇರುವ ತೊಂದರೆಗಳು ಲಾಭ ನಷ್ಟದ ಬಗ್ಗೆ ಸಂವಾದ ನಡೆಸಿದ್ರು.
ಈ ವೇಳೆ ಸಂವಾದದಲ್ಲಿ ಮಹಿಳೆಯೊಬ್ಬರು ರಾಹುಲ್ ಗೆ ಲಿಂಗಾಯಿತ ಪ್ರತ್ಯೇಕ ಧರ್ಮದ ಬಗ್ಗೆ ಪ್ರಶ್ನೆ ಮಾಡಿದ್ದರು. ಲಿಂಗಾಯಿತ ಧರ್ಮದ ವಿಚಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಿರಾ? ಎಂಬ ಪ್ರಶ್ನೆಗೆ ರಾಹುಲ್ ಇದು ನನಗೆ ಸಂಬಂಧಿಸಿದಲ್ಲ. ಸಿದ್ದರಾಮಯ್ಯನವರು ಉತ್ತರ ಹೇಳುತ್ತಾರೆ ಎಂದು ಹೇಳಿ ಸಿಎಂ ಕೈಗೆ ಮೈಕ್ ಕೊಟ್ಟಿದ್ದಾರೆ. ಬಳಿಕ ಮಹಿಳೆಯ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡಿದರು.
ಇದಕ್ಕೂ ಮುನ್ನ ರಾಹುಲ್ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಚರ್ಚೆಯಲ್ಲಿ ಯುವಕರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಾವ ಮಟ್ಟದಲ್ಲಿ ವಿಫಲವಾಗಿದೆ. ಬೂತ್ ಮಟ್ಟದಲ್ಲಿ ಯಾವ ಯಾವ ತೊಂದರೆಗಳು ಇವೆ. ಪಕ್ಷದ ಬಲ ವರ್ಧನೆಗೆ ಯಾವ ರೂಪರೇಷೆಗಳನ್ನು ಮಾಡಿಕೊಳ್ಳಬೇಕು ಎಂದು ಪದಾಧಿಕಾರಿಗಳ ಜೊತೆ ಸುಧೀರ್ಘ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಎಲ್ಲಾ ಕಡೆ ಮುಖಂಡರ ನಡುವೆ ಭಿನ್ನಮತವಿದೆ ಎಲ್ಲವನ್ನು ಸರಿದೂಗಿಸಿಕೊಂಡು ಕೆಲಸ ಮಾಡಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಎಚ್ಚರಿಕೆ ಸಂದೇಶ ನೀಡಿದರು.
ಬೆಣ್ಣೆ ದೋಸೆ ಸವಿದ ರಾಹುಲ್: ಸಂವಾದ ಮುಗಿದ ನಂತರ ಧಾರವಾಡದ ರಾಮ್ ಅಂಡ್ ಕೋ ಸರ್ಕಲ್ ನಲ್ಲಿರುವ ವಿಜಿ ಬೆಣ್ಣೆ ದೋಸೆ ಹೋಟೆಲ್ ಗೆ ಹೋಗಿ ಎರಡು ಬೆಣ್ಣೆದೋಸೆ ಸವಿದರು. ರಾಹುಲ್ ಜೊತೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ ಪರಮೇಶ್ವರ್ ಸೇರಿದಂತೆ ವಿವಿಧ ಮುಖಂಡರು ಸಾಥ್ ನೀಡಿದರು.