ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಶಿವಭಕ್ತ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok Gehlot) ಹೇಳಿದ್ದಾರೆ.
ಗೆಹ್ಲೋಟ್ ಅವರು ರಾಜಸ್ಥಾನದ(Rajasthan) ರಾಜ್ಸಮಂದ್ ಜಿಲ್ಲೆಯ ನಾಥದ್ವಾರ ಪಟ್ಟಣದಲ್ಲಿ ವಿಶ್ವದ ಅತಿ ದೊಡ್ಡ 369 ಅಡಿ ಎತ್ತರದ ಶಿವನ ಪ್ರತಿಮೆಯನ್ನು (World’s Tallest Lord Shiva Statue) ಅನಾವರಣಗೊಳಿಸಿದರು.
10 ವರ್ಷಗಳ ನಂತರ ಭವ್ಯವಾದ ಪ್ರತಿಮೆ ಸಿದ್ಧವಾಗಿದೆ. ದೇಶಾದ್ಯಂತ ಶಿವಭಕ್ತರು ಈ ವಿಚಾರವನ್ನು ಕೇಳಿ ಸಂತೋಷ ಪಡುತ್ತಾರೆ. ನಿಮಗೆ ತಿಳಿದಿದೆಯೇ? ನಮ್ಮ ರಾಹುಲ್ ಗಾಂಧಿ ಕೂಡ ಒಬ್ಬ ಶಿವಭಕ್ತ. ಪ್ರತಿಮೆ ಸಿದ್ಧವಾಗಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.
ಪ್ರತಿಮೆ ಉದ್ಘಾಟನೆಯ ನಂತರ ಅಕ್ಟೋಬರ್ 29 ರಿಂದ ನವೆಂಬರ್ 6 ರವರೆಗೆ ಒಂಬತ್ತು ದಿನಗಳ ಕಾಲ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಏನಿದರ ವಿಶೇಷತೆ?
ಉದಯಪುರದಿಂದ 45 ಕಿಮೀ ದೂರದಲ್ಲಿ ವಿಶಾಲ ವಾತಾವರಣದಲ್ಲಿ ನಿರ್ಮಾಣಗೊಂಡಿರುವ 369 ಅಡಿ ಎತ್ತರದ ಶಿವನ (Lord Shiva) ಪ್ರತಿಮೆಯು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುತ್ತದೆ. ಧ್ಯಾನ ಭಂಗಿಯಲ್ಲಿರುವ ಈ ಪ್ರತಿಮೆ ಸುಮಾರು 20 ಕಿಮೀ ದೂರದಿಂದಲೂ ವೀಕ್ಷಿಸಬಹುದು. `ವಿಶ್ವಾಸ್ ಸ್ವರೂಪಂ’ (Viswas Swaroopam) ವಿಶ್ವದ ಅತೀ ಎತ್ತರದ ಶಿವನ ಪ್ರತಿಮೆಯಾಗಿದ್ದು, ಭಕ್ತರಿಗೆ ನಾಲ್ಕು ವಿಭಾಗದಲ್ಲಿ ಲಿಫ್ಟ್ ಹಾಗೂ ಮೂರು ವಿಭಾಗದಲ್ಲಿ ಮೆಟ್ಟಿಲು ವ್ಯವಸ್ಥೆಯನ್ನೂ ಮಾಡಲಾಗಿದೆ. ಇದನ್ನೂ ಓದಿ: ಗುಜರಾತ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ
ಬೆಟ್ಟದ ಮೇಲೆ ನಿರ್ಮಿಸಲಾದ ಈ ಪ್ರತಿಮೆಯನ್ನು ಧ್ಯಾನದ ಭಂಗಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು 20 ಕಿಮೀ ದೂರದಿಂದ ಗೋಚರಿಸುತ್ತದೆ. ವಿಶೇಷ ದೀಪಗಳನ್ನು ಅಳವಡಿಸಿದ್ದರಿಂದ ರಾತ್ರಿಯಲ್ಲೂ ಸ್ಪಷ್ಟವಾಗಿ ಕಾಣುವಂತೆ ಪತ್ರಿಮೆಯನ್ನು ವಿನ್ಯಾಸ ಮಾಡಲಾಗಿದೆ.
2012ರ ಆಗಸ್ಟ್ನಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ಮೊರಾರಿ ಬಾಪು ಅವರ ಸಮ್ಮುಖದಲ್ಲಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಪ್ರತಿಮೆ ನಿರ್ಮಾಣಕ್ಕೆ 3 ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಕ್ಯೂಬಿಕ್ ಟನ್ ಮರಳು ಬಳಸಲಾಗಿದೆ. ತಾಮ್ರದ ಬಣ್ಣ, ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಜಿಂಕ್ ಮಿಶ್ರಲೋಹ ಲೇಪಿಸಲಾಗಿದೆ. ಮುಂದಿನ 250 ವರ್ಷಗಳ ಕಾಲ ಬಾಳಿಕೆ ಬರುವಂತೆ ನಿರ್ಮಿಸಿದ್ದು, ಇದು 250 ಕಿಮೀ ವೇಗದಲ್ಲಿ ಬೀಸುವ ಗಾಳಿಯನ್ನೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.