– ಆರೋಗ್ಯದ ಕಡೆ ಗಮನಹರಿಸುವಂತೆ ಸೂಚನೆ
– ಬೆಂಗ್ಳೂರಿಗೆ ಬಂದ ತಕ್ಷಣ ಮಾಹಿತಿ ನೀಡಿ
ಧಾರವಾಡ: ಅಪ್ಪು ಸಮಾಧಿ ನೋಡಲು ಓಟದ ಮೂಲಕ ಹೊರಟಿರುವ ಧಾರವಾಡದ ಮೂರು ಮಕ್ಕಳ ತಾಯಿಗೆ ನಟ ರಾಘವೇಂದ್ರ ರಾಜ್ಕುಮಾರ ಫೋನ್ ಮಾಡಿ ಮಾತನಾಡಿದ್ದಾರೆ.
ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ಕಳೆದ ನವೆಂಬರ್ 29 ರಂದು ತನ್ನ ಗ್ರಾಮದಿಂದ ಬೆಂಗಳೂರಿಗೆ ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟಿದ್ದಾರೆ. ಈಗಾಗಲೇ ಈ ಮಹಿಳೆ ಚಿತ್ರದುರ್ಗಕ್ಕೆ ತಲುಪಿದ್ದು, ಈ ಕುರಿತು ಮಾಹಿತಿ ತಿಳಿದ ರಾಘವೇಂದ್ರ ರಾಜ್ಕುಮಾರ್ ಅವರು ದ್ರಾಕ್ಷಾಯಿಣಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್
ಅಲ್ಲದೇ ಬೆಂಗಳೂರಿಗೆ ಬಂದು ಅಪ್ಪು ಸಮಾಧಿಗೆ ತಲುಪಿದ ನಂತರ ಸ್ವತಃ ನಾನೇ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿಸುವ ಭರವಸೆ ಕೊಟ್ಟಿದ್ದಾರೆ. ಆರಾಮಾಗಿ ಬೆಂಗಳೂರಿಗೆ ಬಂದು ತಲುಪಲು ಹೇಳಿರುವ ರಾಘವೇಂದ್ರ ಅವರು, ಆರೋಗ್ಯದ ಕಡೆ ಗಮನ ಇರಲಿ, ಬೆಂಗಳೂರಿಗೆ ಬಂದ ತಕ್ಷಣ ಮಾಹಿತಿ ನೀಡಲು ತಿಳಿಸಿದ್ದಾರೆ.
ದ್ರಾಕ್ಷಾಯಿಣಿ ಅವರು ಈಗಾಗಲೇ ರಸ್ತೆಯಲ್ಲಿ ನೇತ್ರದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತ ಬೆಂಗಳೂರು ಕಡೆ ಹೊರಟಿದ್ದಾರೆ. ಇನ್ನು ದಾರಿಯಲ್ಲಿ ದ್ರಾಕ್ಷಾಯಿಣಿ ಅವರಿಗೆ ಹಲವು ಸಂಘಟನೆ ಸನ್ಮಾನ ಮಾಡಿ ಪ್ರೋತ್ಸಾಹವನ್ನು ನೀಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ನೋಡಲು ಓಡುತ್ತ ಹೊರಟ ಮೂರು ಮಕ್ಕಳ ತಾಯಿ