ಹಾಸನ: ಜಿಲ್ಲೆಯ ಹಲವೆಡೆ ಕಾಡಾನೆ ಹಾವಳಿಗಳು ಮುಂದುವರೆದಿದ್ದು, ಆನೆಗಳ ಚಲನವಲನದ ಬಗ್ಗೆ ಗಮನಹರಿಸಲು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಗೊಂಡಿದೆ. ಎರಡನೇ ದಿನದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಬೇಲೂರಿನ ಬಿಕ್ಕೋಡು ಗ್ರಾಮದ ಕಾಫಿ ಎಸ್ಟೇಟ್ನಲ್ಲಿ ಬೀಡುಬಿಟ್ಟಿದ್ದ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನಲೆ ಶುಕ್ರವಾರ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭಗೊಂಡಿತ್ತು. ಇಂದು ಶನಿವಾರ ಅರವಳಿಕೆ ತಜ್ಞರು ಹೆಣ್ಣಾನೆಯೊಂದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಬಳಿಕ ಸ್ವಲ್ಪ ಓಡಿದ ಹೆಣ್ಣಾನೆ ಆಮೇಲೆ ನಿಂತಿದೆ. ಹೆಣ್ಣಾನೆ ಪಕ್ಕ ಸಾಕಾನೆಗಳನ್ನು ನಿಲ್ಲಿಸಿಕೊಂಡು ರೇಡಿಯೋ ಕಾಲರ್ ಅಳವಡಿಸಿ ಅದೇ ಎಸ್ಟೇಟ್ನಲ್ಲೇ ಕಾಡಾನೆಯನ್ನು ಬಿಡಲಾಗಿದೆ.
ಸಾಕಾನೆ ಭೀಮಾ ನೇತೃತ್ವದಲ್ಲಿ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನಡೆದಿದ್ದು ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಹೆಸರಿನ ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.